News Karnataka Kannada
Thursday, April 25 2024
ಕರಾವಳಿ

ಸುಳ್ಯ ನಗರ ಪಂಚಾಯಿತಿ ಮುಂಭಾಗದ ತ್ಯಾಜ್ಯ ತೆರವು ಆರಂಭ

Photo Credit :

ಸುಳ್ಯ ನಗರ ಪಂಚಾಯಿತಿ ಮುಂಭಾಗದ ತ್ಯಾಜ್ಯ ತೆರವು ಆರಂಭ

ಸುಳ್ಯ: ಸುಳ್ಯ ನಗರ ಪಂಚಾಯಿತಿಗೆ ನೂತನ ಆಡಳಿತ ಅಧಿಕಾರ ವಹಿಸಿದ ಬೆನ್ನಲ್ಲೇ ಸುಳ್ಯ ನಗರ ಪಂಚಾಯಿತಿ ಮುಂಭಾಗದಲ್ಲಿ ಶೇಖರಿಸಿಟ್ಟು ತೀವ್ರ ವಿವಾದಕ್ಕೆ ಕಾರಣವಾಗಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡುವುದಕ್ಕೆ ಚಾಲನೆ ದೊರೆತಿದೆ.

ಕಳೆದ ಎರಡು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಸುಳ್ಯ ನಗರದ ತ್ಯಾಜ್ಯದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆ ಆಗಿದ್ದ ನಗರ ಪಂಚಾಯಿತಿ ಪರಿಸರಕ್ಕೆ ಕೊನೆಗೂ ಮುಕ್ತಿ ದೊರೆಯುವ ಸಾಧ್ಯತೆ ಇದೆ. ನಗರ ಪಂಚಾಯಿತಿ ಮುಂಭಾಗದ ಕಟ್ಟಡ ಮತ್ತು ಕಚೇರಿಯ ಹಿಂಭಾಗದಲ್ಲಿ ತುಂಬಿಡಲಾಗಿದ್ದ ಕಸ ದುರ್ನಾತ ಬೀರಿ ಪರಿಸರವನ್ನೇ ಕೆಡಿಸಿತ್ತು. ಇದೀಗ ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಸಂಬಂಧಪಟ್ಟು ಪ್ರಕ್ರಿಯೆಗಳು ಆರಂಭಗೊಂಡಿದೆ. ಪ್ರಥಮ ಹಂತದಲ್ಲಿ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್ ಕಸವನ್ನು ಕಲ್ಚರ್ಪೆಗೆ ಸಾಗಿಸಲು ಆರಂಭಿಸಿದ್ದಾರೆ.

ನಗರದಿಂದ ಸಂಗ್ರಹಿಸಲಾಗುವ ಒಣ ಕಸದಿಂದ ಮತ್ತು ನಗರ ಪಂಚಾಯತ್‍ನಲ್ಲಿ ಕೂಡಿಟ್ಟ ಕಸದಿಂದ ಪ್ಲಾಸ್ಟಿಕ್ ಪ್ರತ್ಯೇಕಿಸಲಾಗುತ್ತದೆ. ಹೀಗೆ ಪ್ರತ್ಯೇಕಿಸಿದ ಪ್ಲಾಸ್ಟಿಕ್‍ಗಳನ್ನು ಕಲ್ಚರ್ಪೆಗೆ ಕೊಂಡೊಯ್ದು ಅಲ್ಲಿನ ಶೆಡ್‍ನಲ್ಲಿ ಶೇಖರಿಸಲಾಗುತ್ತದೆ. ಶೆಡ್‍ಗೆ ನೆಟ್‍ಗಳನ್ನು ಹಾಕಿ ಭದ್ರ ಪಡಿಸಿ ಅಲ್ಲಿ ಶೇಖರಿಸಲಾಗುತ್ತದೆ. ಪ್ಲಾಸ್ಟಿಕ್ ಪ್ರೆಸ್ಸಿಂಗ್ ಮೆಷಿನ್ ತಂದು ಆ ಪ್ಲಾಸ್ಟಿಕ್‍ನ್ನು ಪ್ರೆಸ್ ಮಾಡಿ ಅದರ ಪ್ರಮಾಣವನ್ನು ಕಡಿಮೆ ಮಾಡಲಾಗುವುದು. ಬಳಿಕ ಅದನ್ನು ಮರು ಬಳಕೆಗೆ ಮಾರಾಟ ಮಾಡುವ ಯೋಚನೆ ರೂಪಿಸಲಾಗಿದೆ. ನಗರ ಪಂಚಾಯತ್ ವತಿಯಿಂದ ಬರ್ನಿಂಗ್ ಮೆಷಿನ್‍ಗಳನ್ನು ಅಳವಡಿಸಲಾಗುವುದು. ಅದಕ್ಕೆ ಅನುಮತಿ ದೊರೆಯುವ ಪ್ರಕ್ರಿಯೆಗಳು ಪೂರ್ತಿಗೊಂಡಿದೆ. ಈ ಬರ್ನಿಂಗ್ ಮೆಷಿನ್ ಮೂಲಕ ಕಲ್ಚರ್ಪೆಯ ಡಂಪಿಂಗ್ ಯಾರ್ಡ್‍ನಲ್ಲಿ ಈ ಹಿಂದೆ ತುಂಬಿರುವ ಕಸವನ್ನು ವೈಜ್ಞಾನಿಕವಾಗಿ ಉರಿಸಲಾಗುವುದು ಎಂದು ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿವರಿಸಿದ್ದಾರೆ. ನಗರದಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಕೊಂಡೊಯ್ಯಲಾಗುತ್ತಿದ್ದು ಸದ್ಯ ಅದೇ ರೀತಿ ಮುಂದುವರಿಸಲಿದೆ. ನಗರ ಪಂಚಾಯತ್‍ನಲ್ಲಿ ಶೇಖರಗೊಂಡಿರುವ ಕಸದಿಂದ ಪ್ಲಾಸ್ಟಿಕ್ ಬಾಟ್ಲಿ, ರಟ್ಟು ಮತ್ತಿತರ ವಸ್ತುಗಳನ್ನು ಪ್ರತ್ಯೇಕಿಸಿ ಮರು ಬಳಕೆಗೆ ಉಪಯೋಗಕ್ಕೆ ಮಾರಾಟ ಮಾಡುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

 

ವಿವಾದದ ಕೇಂದ್ರ ಬಿಂದು

ನಗರ ಪಂಚಾಯತ್‍ನ ಕಸ ವಿಲೇವಾರಿ ಕೇಂದ್ರದ ಕಲ್ಚರ್ಪೆಯಲ್ಲಿ ಕಸದ ರಾಶಿ ತುಂಬಿ ಹೋದ ಕಾರಣ ಅಲ್ಲಿ ಕಸ ಹಾಕಲು ಸಾಧ್ಯವಿಲ್ಲದೇ ಪರಿಸ್ಥಿತಿ ಬಿಗಡಾಯಿಸಿತ್ತು. ಕಸ ವಿಲೇವಾರಿಗೆ ಬೇರೆ ಸ್ಥಳದ ಬೇಡಿಕೆ ಇದ್ದರೂ ಎಲ್ಲಿಯೂ ಸಮರ್ಪಕವಾದ ಸ್ಥಳ ಹುಡುಕಲು ಸಾಧ್ಯವಾಗಲಿಲ್ಲ. ಇದರಿಂದ ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸಿ ಉಳಿದ ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್‍ನ ಮುಂಭಾಗದ ಕಟ್ಟದಲ್ಲಿ ಶೇಖರಿಸಿಡಲು ಆರಂಭಿಸಿದರು. ಆದರೆ ಕೆಲವು ತಿಂಗಳ ನಂತರ ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ಕಸದ ರಾಶಿಯೇ ತುಂಬಿ ದುರ್ನಾತ ಬೀರಲು ಆರಂಭಗೊಂಡಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.ಇದೀಗ ಹೊಸತಾಗಿ ನಗರ ಪಂಚಾಯತ್ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದು ತ್ಯಾಜ್ಯಕ್ಕೆ ಮುಕ್ತಿ ನೀಡುವ ಬಗ್ಗೆ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು