ಸುಳ್ಯ: ಚುನಾವಣೆ ನಡೆದು ಒಂದೂವರ ವರ್ಷಗಳ ಬಳಿಕ ಸುಳ್ಯ ನಗರ ಪಂಚಾಯಿತಿಗೆ ನೂತನ ಸಾರಥಿಗಳ ಆಯ್ಕೆ ನಡೆದಿದೆ. ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷರಾಗಿ ವಿನಯಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿನಯಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಿನಿ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ವಿನಯಕುಮಾರ್ ಅವರನ್ನು ಸದಸ್ಯರಾದ ಬಾಲಕೃಷ್ಣ ರೈ ಸೂಚಿಸಿ, ಸುಧಾಕರ ಅನುಮೋದಿಸಿದರು. ಸರೋಜಿನಿ ಅವರನ್ನು ಸದಸ್ಯರಾದ ಶಶಿಕಲಾ ನೀರಬಿದಿರೆ ಸೂಚಿಸಿ ಶೀಲಾ ಅರುಣ ಕುರುಂಜಿ ಅನುಮೋದಿಸಿದರು.
ತಹಶೀಲ್ದಾರ್ ಅನಂತಶಂಕರ್ ಚುನಾವಣಾಧಿಕಾರಿಯಾಗಿದ್ದರು. ಶಾಸಕ ಎಸ್.ಅಂಗಾರ, ನಗರ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವಿಭಾಗಕ್ಕೆ ಮೀಸಲಾಗಿದೆ. 2019 ಮೇನಲ್ಲಿ ನಡೆದ ಚುನಾವಣೆಯಲ್ಲಿ 20 ವಾರ್ಡ್ಗಳಲ್ಲಿ 14 ಸ್ಥಾನ ಪಡೆದು ಬಿಜೆಪಿ ಸತತ ನಾಲ್ಕನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ನ 4 ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ನಗರದ ಅಭಿವೃದ್ಧಿಗೆ ಅನುದಾನ: ಅಂಗಾರ
ಸುಳ್ಯ ನಗರದ ಅಭಿವೃದ್ಧಿಗೆ ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ನಡೆಸುವುದಾಗಿ ಶಾಸಕ ಎಸ್.ಅಂಗಾರ ಹೇಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು ಎಲ್ಲಾ ಸದಸ್ಯರು ಒಟ್ಟಾಗಿ ನಗರದ ಅಭಿವೃದ್ಧಿಗಾಗಿ ದುಡಿಯಬೇಕು. ಎಲ್ಲಾ ವಾರ್ಡ್ಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ, ಸುಳ್ಯ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳಿವೆ. ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರಕ್ಕಾಗಿ ಪ್ರಯತ್ನ ನಡೆಸಬೇಕಾಗಿದೆ. ನಗರದ ಮಾಸ್ಟರ್ ಪ್ಲಾನ್ ಜನರಿಗೆ ಹೆಚ್ಚು ಅನುಕೂಲ ಆಗುವ ರೀತಿಯಲ್ಲಿ ರೂಪಿಸಲು ಪ್ರಯತ್ನ ನಡೆಸಲಾಗುವುದು. ನಗರದ ಆದಾಯದ ಮೂಲವನ್ನು ಹೆಚ್ಚಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಡೇವಿಡ್ ಧೀರಾ ಕ್ರಾಸ್ತಾ, ಶೀಲಾ ಅರುಣ ಕುರುಂಜಿ, ಶರೀಫ್ ಕಂಠಿ, ಶಶಿಕಲಾ ನೀರಬಿದಿರೆ, ಬುದ್ಧ ನಾಯ್ಕ್ ಮಾತನಾಡಿದರು.