ಕಾರವಾರ: ಹೊನ್ನಾವರದ ಹೊಸಾಡದಲ್ಲಿ ಸೋಮವಾರ ಸ್ಪೋಟಕ ಸಿಡಿದ ಪ್ರದೇಶದಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ. ಇದರೊಂದಿಗೆ ಸುತ್ತಲಿನ ಗಿಡ-ಮರಗಳ ಮೇಲೆ ಬಿಳಿ ಬಣ್ಣದ ಪುಡಿಗಳು ಕಂಡು ಬಂದಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಹೇಳಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 80 ರಿಂದ 100 ಮೀಟರ್ ಅಂತರದಲ್ಲಿ ಈ ವಸ್ತು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರೀಯ ದಳದವರು ವಸ್ತುವಿನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದ ನಂತರ ಬಾಂಬ್ ನಿಷ್ಕ್ರೀಯ ದಳದವರು ಪಂಚನಾಮೆ ನಡೆಸಿ ದೊರೆತಿರುವ ವಸ್ತುವಿನ ಕುರಿತು ಪೊಲೀಸ್ ಇಲಾಖೆಗೆ ವರದಿ ನೀಡಲಿದ್ದಾರೆ. ಈಗಾಗಲೇ ಬಾಂಬ್ ನಿಷ್ಕ್ರೀಯ ದಳದವರು ಗಾಯಾಳುವಿನ ರಕ್ತದ ಮಾದರಿ, ಬಟ್ಟೆ ಹಾಗೂ ಸ್ಥಳದಲ್ಲಿ ಕೆಲ ಕುರುಹುಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿತ ಗಾಯಾಳು ರೈಮಂಡ್ ಕೈತಾನ್ ಮಿರಾಂಡ್ಗೆ ಪ್ರಜ್ಞೆ ಬಂದಿದ್ದು, ವೈದ್ಯರ ಇನ್ನಷ್ಟು ಆರೈಕೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಯಾವುದೇ ವಿಚಾರಣೆ ನಡೆಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೀಟರ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಾಸಕ ಮಂಕಾಳು ವೈದ್ಯರಿಗೆ ಈಗಾಗಲೇ ಇಬ್ಬರು ಗನ್ಮ್ಯಾನ್ಗಳಿದ್ದು, ಅವರು ಏರಿದ್ದ ವೇದಿಕೆ ಸಮೀಪದಲ್ಲಿ ಸ್ಪೋಟಕ ಸಿಡಿದ ನಂತರ ಇನ್ನಷ್ಟು ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.