ಬಂಟ್ವಾಳ : ಕಾರೊಂದು 20 ಅಡಿ ಆಳದ ಮನೆಯಂಗಳಕ್ಕೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ವೀರಕಂಬ ಗ್ರಾಮದ ನಿವಾಸಿಗಳಾದ ದಿನೇಶ್ ಮಯ್ಯ ಹಾಗೂ ಸಾವಿತ್ರಿ ಎಂಬವರು ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಕಾರ್ಯ ನಿಮಿತ್ತ ತೆರಳುತ್ತಿದ್ದ ವೇಳೆ ಚಂದಳಿಕೆ ಶಾಲಾ ಮುಂಭಾಗದಲ್ಲಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದು ಬೃಹತಾಕಾರದ ಆಳದಲ್ಲಿರುವ ಮನೆಯೊಂದರ ಅಂಗಳಕ್ಕೆ ಉರುಳಿದೆ.ಇದೇ ವೇಳೆ ಕಲ್ಲೊಂದಕ್ಕೆ ಸಿಲುಕಿದ ಕಾರು ಬಳಿಕ ನಿಧಾನವಾಗಿ ಅಂಗಳಕ್ಕೆ ಉರುಳಿದೆ.
ಈ ವೇಳೆ ವೇಗವೂ ಕಡಿಮೆಯಾದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಸಾವಿತ್ರಿ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ವಿಟ್ಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯವಿಲ್ಲದೆ ಪವಾಢಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಇಲ್ಲಿಯ ಮನೆಯ ಕೆಲಸ ನಡೆಯುತ್ತಿದ್ದು, ಇದರ ಕೆಳಗಡೆ ಪ್ರತಿ ನಿತ್ಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆ ಬೆಳಿಗ್ಗೆಯೆ ಸಂಭವಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.