ಮಂಗಳೂರು: ಹಾವೊಂದನ್ನು ಕೊಂದ ಕಾರಣಕ್ಕೆ ಪಂಚಾಯತ್ ಸದಸ್ಯ ಸೇರಿದಂತೆ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ವಿಟ್ಲದ ಕೊಲ್ನಾಡ್ ಎಂಬಲ್ಲಿ ನಡೆದಿದೆ.
ಕೊಲ್ನಾಡ್ ನಿವಾಸಿ ಸಿದ್ದೀಕ್ ಎಂಬವರು ಕೆಲ ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದ ಹಾವನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಂದಿದ್ದರು. ಆ ಬಳಿಕ ಆ ಊರಿನ ಬೊರ್ ವೆಲ್ ಗಳಲ್ಲಿ ನೀರು ಬತ್ತಿ ಹೋಯ್ತು, ಮಾತ್ರವಲ್ಲ ಹೊಸ ಬೋರ್ ವೆಲ್ ತೆಗೆದಾಗಲೂ ಅಲ್ಲಿ ನೀರು ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಮಂತ್ರವಾದಿಯೊಬ್ಬರ ಬಳಿ ಹೋಗಿ ವಿಚಾರಿಸಿದ್ದಾರೆ. ಈ ಊರಿನಲ್ಲಿ ವ್ಯಕ್ತಿಯೊಬ್ಬರು ಹಾವನ್ನು ಕೊಂದಿದ್ದು, ಇದರಿಂದ ನೀರು ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಹಾವನ್ನು ಕೊಂದ ಸಿದ್ದೀಕ್ ಮನೆಗೆ ತೆರಳಿದ ತಂಡ ಆತನ ಮೇಲೆ ಹಲ್ಲೆ ನಡೆಸಿದ್ದು, ಶೀಘ್ರವೇ ಮನೆ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸಿದ್ದೀಕ್ ಪತ್ನಿ ಮುಮ್ತಾಝ್ ಆರೋಪಿಸಿದ್ದಾರೆ.
ಮನೆಯವರ ರಕ್ಷಿಸಲು ನಮ್ಮ ಮೆನೆಗೆ ಬಂದ ಹಾವನ್ನು ಕೊಂದಿದ್ದು ನಿಜ. ಆದರೆ ಈ ಕಾರಣದಿಂದ ನಮ್ಮ ಮೇಲೆ ಪಂಚಾಯತ್ ಸದಸ್ಯ ಪವಿತ್ರ ಪೂಂಜ, ಹಾಗೂ ಸಂದೀಪ್ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದವರು ಆರೋಪಿಸಿದ್ದಾರೆ. ನಾವು ಸರಕಾರದಿಂದ ಸಿಕ್ಕಿದಂತಹ ಮನೆಯಲ್ಲಿ ಬದುಕುತ್ತಿದ್ದು, ನಮ್ಮನ್ನು ಮನೆ ಬಿಟ್ಟು ಹೋಗುವಂತೆ ಬೆದರಿಸಿ ಹಲ್ಲೆ ನಡೆಸಿದ್ದು ಕೂಲಿ ಮಾಡಿ ಬದುಕುವ ನಮಗೆ ಬೇರೆ ಮನೆ ಮಾಡುವ ವ್ಯವಸ್ಥೆ ಇಲ್ಲವೆಂದು ಮುಮ್ತಾಝ್ ತಮ್ಮ ಅಳಲನ್ನು ತೋಡಿಕೊಂಡರು