ಮುಡಿಪು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಚರ್ಚ್ ನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ರಾಜಗುಡ್ಡೆಯ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ. ಪಜೀರುವಿನಲ್ಲಿರುವ ಚರ್ಚ್ ಗೆ ನುಗ್ಗಿದ್ದ ಕಳ್ಳರ ತಂಡ ಚರ್ಚ್ ನ ಪರಮ ಪ್ರಸಾದ, ಪಾತ್ರಗಳು ಸೇರಿದಂತೆ ಲ್ಯಾಪ್ ಟಾಪ್ ಗಳನ್ನು ಕಳವು ಗೈದು ಪರಾರಿಯಾಗಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾ,ಮರಾದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಕಳ್ಳತನದ ಆರೋಪಿಗಳನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಸಾಹುಲ್ ಹಮೀದ್ ತಲೆಮರೆಸಿಕೊಂಡಿದ್ದ. ಅಲ್ಲದೆ ಈತ ದೇರಳಕಟ್ಟೆ ಮೊಬೈಲ್ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿಗಳಿಗೂ ನುಗ್ಗಿ ಕಳ್ಳತನ ನಡೆಸಿದ್ದ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಈತನನ್ನು ಗುರುವಾರ ಕೊಣಾಜೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್, ಪಿಎಸ್ಐ ಸುಧಾಕರ್. ಸಿಬ್ಬಂದಿಗಳಾದ ಸಂತೋಷ್ ಸಿ.ಜೆ, ಶಿವಪ್ರಸಾದ್, ಚಂದ್ರಶೇಖರ್, ರಾಜೇಶ್ ಮುಂತಾದವರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.