ಮಂಗಳೂರು: ಜಾನಪದ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಂಡು ಅದನ್ನು ಶಾಶ್ವತವಾಗಿ ನೆಲೆ ನಿಲ್ಲಿಸುವ ಪ್ರಯತ್ನ ಯುವಜನತೆಯಿಂದ ಆಗಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ತಲಪಾಡಿ ಪಂಜಾಳದಲ್ಲಿ ಭಾನುವಾರ ಜರಗಿದ ಹೊನಲು ಬೆಳಕಿನ ಸೂರ್ಯ ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಜಾನಪದ ಕಲೆ ಹಾಗೂ ಕ್ರೀಡೆಗಳು ಸೌಹಾರ್ದಯುತ ಕೇಂದ್ರಗಳಾಗಿವೆ. ಕಂಬಳದ ಸಂಘಟಕರಿಂದ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಚಿರಪರಿಚಿತವಾಗಿಸುವ ಕಾರ್ಯ ಆಗಿದೆ, ಆಧುನಿಕ ತಂತ್ರಜ್ಞಾನಗಳು ಬದಲಾದಂತೆ ಕಾನೂನುಗಳ ಬದಲಾವಣೆಗಳು ಆಗುತ್ತಿದೆ. ರಾಜ್ಯ ಸರಕಾರದಿಂದ ಕ್ರೀಡೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದ್ದು, ಕಂಬಳಕ್ಕೆ ಕಾನೂನು ಅಡ್ಡಿಯಾದರೂ ರಾಜ್ಯ ಸರಕಾರ ಅದನ್ನು ಸಡಿಲುಗೊಳಿಸುವಲ್ಲಿ ಯಶಸ್ವಿಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಜಿಲ್ಲೆಯ ಜನತೆ ಮತ್ತು ಸರಕಾರ ಮನೇಕಾ ಗಾಂಧಿ ಮನವೊಲಿಸಿ ಕ್ರೀಡೆಯ ಬಗ್ಗೆ ಸಮಗ್ರ ವರದಿ ನೀಡುವ ಅಗತ್ಯ ಇದೆ ಎಂದರು.
ಈ ಸಂದರ್ಭ ಕಂಬಳದ ಸಾಂಪ್ರದಾಯಿಕ ಉದ್ಘಾಟನೆಯನ್ನು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿರಿಯ ಅರ್ಚಕ ವೇದಮೂರ್ತಿ ಬಾಲಕೃಷ್ಣ ಭಟ್ ನೆರವೇರಿಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ಸಚ್ಚಿದಾನಂದ ಭಂಡಾರಿ, ಕಾರ್ಯಾಧ್ಯಕ್ಷ ಟಿ.ರವೀಂದ್ರನಾಥ ಶೆಟ್ಟಿ ದೊಡ್ಡಮನೆ, ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹರೇಕಳ ಉಳಿದೊಟ್ಟು, ಗೋಪಾಲಕೃಷ್ಣ ಮೇಲಾಂಟ ಬಾವ ತಲಪಾಡಿ, ಗಿರೀಶ್ ಆಳ್ವ ಮೋರ್ಲ, ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯೆ ಅಕ್ಷತಾ, ಗಡಿ ಪ್ರಧಾನ ನಾರಾಯಣ ಶೆಟ್ಟಿ ಕಿನ್ಯಗುತ್ತು, ಬೆಂಗಳೂರು ಖಾಸಗಿ ಶಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ್, ಪಂ. ಸದಸ್ಯೆ ಜಯಂತಿ ಪಕ್ಕಳ, ಶ್ರೀಲತಾ, ಪ್ರಗತಿಪರ ಕೃಷಿಕ ಜಯಸೂರ್ಯ ರೈ ಮರೋಡಿ, ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್ ತಲಪಾಡಿ, ಸುಬ್ಬಯ್ಯ ಮಾರ್ಲ ಉಳಿಪಾಡಿಗುತ್ತು, ಪ್ರದೀಪ್ ಕಿಲ್ಲೆ ಮೇಗಿನ ಪಂಜಾಳ ಗುತ್ತು, ವೈಭವ್ ಶೆಟ್ಟಿ ನಾರ್ಲ, ಉದಯಕುಮಾರ್ ಶೆಟ್ಟಿ(ಸಾನು) ನಾರ್ಲ, ಪ್ರಶಾಂತ್ ಚೌಟ ಪಂಜಿಮುಂಡೇಲು, ವಿನಯಕುಮಾರ್ ಶೆಟ್ಟಿ ನಾರ್ಲ, ಸಿದ್ಧೀಕ್ ತಲಪಾಡಿ ಉಪಸ್ಥಿತರಿದ್ದರು.