ಪುತ್ತೂರು: ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಮದ್ಯ ಸಾಗಾಟಕ್ಕೆ ಬಳಸಲಾದ ಆಕ್ಟೀವಾ ಹೋಂಡಾ ಮತ್ತು ಮದ್ಯವನ್ನು ವಶಕ್ಕೆ ತೆಗೆದು ಕೊಂಡ ಘಟನೆ ಗುರುವಾರ ರಾತ್ರಿ ಪಾಲ್ತಾಡಿ ಮಂಜುನಾಥ ನಗರದ ಬಂಬಿಲ ಸಮೀಪ ನಡೆದಿದೆ.
ಪೆರಾಜೆ ಗ್ರಾಮದ ಮುಕ್ರು ನಿವಾಸಿ ಉಮೇಶ್ ಪೂಜಾರಿ ಎಂಬವರು ಬಂಧಿತ ಆರೋಪಿ, ಅವರಿಂದ ಮದ್ಯ ಸಾಗಟಕ್ಕೆ ಬಳಸಲಾದ ಆಕ್ಟೀವಾ ಹೋಂಡಾ(ಕೆ.ಎ.21 ಆರ್.7686) ಮತ್ತು 2 ರಟ್ಟಿನ ಪೆಟ್ಟಿಗೆಯಲ್ಲಿದ್ದ 17.280 ಲೀಟರ್ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ. ಅಬಕಾರಿ ಪೊಲೀಸ್ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸಂಶಯಾಸ್ಪದ ರೀತಿಯಲ್ಲಿ ಬಂಬಿಲ ಸೇತುವೆ ಬಳಿ ಹೋಗುತ್ತಿದ್ದ ಆಕ್ಟೀವಾ ಹೋಂಡಾವನ್ನು ಪರಿಶೀಲಿಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ. ವಿಚಾರಣೆ ವೇಳೆ ಅಂಕತಡ್ಕದಿಂದ ಪರಣೆ ಕಡೆ ಸಾಗಟ ಮಾಡುತ್ತಿದ್ದು ಸುರೇಶ್ ಗೌಡ ಎಂಬವರಿಗೆ ನೀಡುವುದಾಗಿ ಆರೋಪಿ ತಿಳಿಸಿದ್ದಾನೆ. ಸುರೇಶ್ ಗೌಡರು ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಅಬಕಾರಿ ಉಪವಿಭಾಗದ ಕಚೇರಿಯ ಅಬಕಾರಿ ಉಪ ಅಧೀಕ್ಷಕ ಚಂದ್ರಪ್ಪರವರ ಆದೇಶದ ಮೇರೆಗೆ ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಶಿವಪ್ರಸಾದ್ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ನವೀನ್ ಕುಮಾರ್ ಮತ್ತು ಸಿಬಂದಿಗಳಾದ ಉಮೇಶ್, ಪ್ರವೀಣ್, ಪದ್ಮನಾಭ ಮತ್ತು ವಾಹನ ಚಾಲಕ ಬಾಲಕೃಷ್ಣರವರು ಕಾರ್ಯಾಚರಣೆ ನಡೆಸಿದ್ದರು.