ಕಾಸರಗೋಡು: ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ದಂಪತಿಯ ಮೇಲೆ ಇನ್ನೊಂದು ವಾಹನ ಹರಿದು ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಮಂಜೇಶ್ವರ ಸಮೀಪದ ವಾಮಂಜೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಇವರೊಂದಿಗಿದ್ದ ಒಂದು ವರ್ಷದ ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದೆ. ಮೃತಪಟ್ಟವರನ್ನು ಪಾವೂರಿನ ಜಕೀರ್ (32), ಪತ್ನಿ ಹಸೀನಾ (24) ಎಂದು ಗುರುತಿಸಲಾಗಿದೆ. ಉಪ್ಪಳ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಟ್ಯಾಂಕರ್ ಲಾರಿಯೊಂದನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಮಗುಚಿ ಬಿದ್ದಿದ್ದು ರಸ್ತೆಗೆಸೆಯಲ್ಪಟ್ಟ ದಂಪತಿ ಮೇಲೆ ಇನ್ನೊಂದು ವಾಹನ ಹರಿದಿದ್ದು, ಜಕೀರ್ ಸ್ಥಳದಲ್ಲೇ ಮೃತಪಟ್ಟರೆ ಹಸೀನಾ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರು.
ಅಪಘಾತದ ಬಳಿಕ ಅಲ್ಪ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.