ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ಮಂಗಳೂರು ಇವರು ಆಯೋಜಿಸಿದ್ದ ಬೀಕನ್ಸ 2016, ಶೋಷಿತರಿಗೆ ಧ್ವನಿಯಾಗುವ ಧ್ಯೇಯ ಹೊಂದಿದ ಮೀಡಿಯಾ ಹಬ್ಬವನ್ನು ‘ನಾನು ಅವನಲ್ಲ ಅವಳು’ ಚಿತ್ರದ ನಿರ್ದೇಶಕ, ಬಿ.ಎಸ್.ಲಿಂಗದೇವರವರು ಉದ್ಘಾಟಿಸಿದರು.
ಸಿನಿಮಾ ಕಾರ್ಯಗಾರವನ್ನು ಉದ್ಘಾಟಿಸಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಯಂತ್ರವನ್ನಾಗಿಸುತ್ತಿದೆ. ಅದರೆ ಅವರು ಸಮಾಜವನ್ನು ಅರಿಯುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಹೊರ ದೇಶಗಳಲ್ಲಿ ಸಿನಿಮಾದ ಬಗ್ಗೆ ಅಧ್ಯಯನ ಮಾಡಲು ಅನೇಕ ವಿಶ್ವವಿದ್ಯಾಲಯಗಳಿವೆ ಅದರೆ ನಮ್ಮಲ್ಲಿ ಅದರ ಕೊರತೆ ಎದ್ದು ಕಾಣುತ್ತದೆ ಎಂದು ವಿಷಾದಿಸಿದರು. ಇದರಿಂದ ಸಿನಿಮಾ ಕ್ಷೇತ್ರಕ್ಕೆ ಏನೂ ಅರಿಯುದವರು ಲಗ್ಗೆ ಇಡುತ್ತಿದ್ದಾರೆ ಎಂದು ಹೇಳಿದರು.
ಉದ್ಘಾಟನೆಯ ನಂತರ ಅವರು ನಿರ್ದೇಶಿಸಿದ್ದ 2 ರಾಷ್ಟ್ರಪ್ರಶಸ್ತಿ ಪಡೆದ, ‘ನಾನು ಅವನಲ್ಲ ಅವಳು’ ಚಿತ್ರ ಪ್ರದರ್ಶನ ಕಂಡಿತು. ಆ ನಂತರ ಅದರ ಬಗ್ಗೆ ಸಂವಾದವೂ ನಡೆಯಿತು. ಸಂವಾದದಲ್ಲಿ ಒಬ್ಬಳು ನಿಜವಾದ ಮಂಗಳಮುಖಿಯ ಸ್ಫೂರ್ತಿಯಿಂದ ಮಾಡಿದ ಕಥೆಯಿದು ಎಂದು ಹೇಳಿದರು.
ಭೋಜನದ ನಂತರ ಅನೇಕ ಸ್ಪರ್ಧೆಗಳು ನಡೆಯಿತು. ರೇಡಿಯೋ ಜಾಕಿ, ಉತ್ಪನ್ನ ಬಿಡುಗಡೆ, ಸ್ಟೇಂಡ್ಅಪ್ ಕಾಮಿಡಿ, ಮೂವೀ ಸ್ಪೂಫ್ ಹೀಗೆ ಅನೇಕ ಸ್ಪರ್ಧೆಗಳು ಜರುಗಿದವು. ಅಲ್ಲದೆ ಕಾಲೇಜುಗಳಿಂದ 130 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಗಳೆಲ್ಲವು ಅಚ್ಚುಕಟ್ಟಾಗಿ ನಡೆದವು. ಸಮಾರಂಭದಲ್ಲಿ ಕಾಲೇಜಿನ ಮುಖ್ಯಸ್ಥರಾದ, ರವಿರಾಜ ಕಿಣಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ, ದೀಕ್ಷಿತಾ ಪ್ರಶಾಂತ್ ಅಲ್ಲದೆ ಕಾಲೇಜಿನ ಭೋದಕ, ಭೋದಕೇತರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.