ಬೆಳ್ತಂಗಡಿ: ಸರ್ವಧರ್ಮೀಯ ಯುವಜನತೆ ಧರ್ಮ, ಅರ್ಥ, ಕಾಮ, ಮೋಕ್ಷಗಳ ಬಗ್ಗೆ ಚಿಂತಿಸಿದಾಗ ಶಾಂತಿಯುತ ನಾಗರಿಕ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅಭಿಪ್ರಾಯಪಟ್ಟರು.
ಧರ್ಮಸ್ಥಳ ಲಕ್ಷದೀಪೋತ್ಸವದ ನಾಲ್ಕನೇ ದಿನವಾದ ಭಾನುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾದ 84 ನೇ ಸರ್ವಧರ್ಮ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚತುರ್ವೇಧ ಪುರುಷಾರ್ಥಗಳ ಶಕ್ತಿಯ ಬಗ್ಗೆ, ಅವುಗಳನ್ನು ಅನುಸರಿಸಿದರೆ ಆಗುವ ಸಾಮರಸ್ಯದ ಬಗ್ಗೆ ಯುವಪೀಳಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಲ್ಲಿ ಭಾಂಧವ್ಯತೆಯ ಸಮಾಜ ನಿರ್ಮಾಣ ಸಾಧ್ಯ. ಬಹುಮತೀಯ ರಾಷ್ಟ್ರ ನಮ್ಮದು. ನಮ್ಮ ಸಂವಿಧಾನ ಎಲ್ಲರಿಗೂ ರಕ್ಷಣೆ ನೀಡಿದೆ. ಮತೀಯ ವೈಚಾರಿಕತೆಯನ್ನು ಜನರಿಗೆ ಹೇಳಿ ಪ್ರಜ್ಞಾವಂತಿಕೆಯನ್ನು ಮೂಡಿಸುವ ಕೆಲಸವನ್ನು ಇಂತಹ ಸಮ್ಮೇಳನಗಳಿಂದ ಸಾಧ್ಯ. ಬೇರೆ ಮತೀಯರ ವಿಚಾರಗಳನ್ನು ತಿಳಿದುಕೊಳ್ಳುವಂತಹ ಅವಕಾಶಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಎಲ್ಲ ಮತೀಯ ವಿಚಾರಗಳನ್ನು ಗೌರವಿಸಿ ಬಾಳಬೇಕು ಎಂಬ ಸಂದೇಶ ಇಲ್ಲಿಂದ ಸಿಗುತ್ತದೆ. ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿ ಆಧ್ಯಾತ್ಮಿಕದ ಬಗ್ಗೆ ವಿಚಾರ ಮಂಥನ ಪಡೆಯುವ ಕಾಲ ಬಂದಿದೆ ಎಂದರು.
ನೀರಿನ ಕೊರತೆಯ ಬಗ್ಗೆ ಪ್ರಸ್ತಾವಿಸಿದ ನ್ಯಾಯಮೂರ್ತಿಗಳು, ನಿಸರ್ಗ, ಪ್ರಾಣಿ, ಭೂ, ಅರಣ್ಯ ನಾಶದ ಪರಿಣಾಮ ಇಂದು ನೀರಿನ ಅಭಾವವನ್ನು ಎದುರಿಸುವತ್ತ ನಾವು ಸಾಗುತ್ತಿದ್ದೇವೆ. ಇಂತಹ ಪರಿಸ್ಥಿತಿಗೆ ನಾವೇ ಕಾರಣವಾಗಿದ್ದೇವೆ. ವೈಚಾರಿಕತೆಯುಳ್ಳ, ಜ್ಞಾನವಂತ, ಅತಿ ಆಸೆ ಇರದ ಸಮಾಜ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದು ಅವರು ಹಿಂದು, ಕ್ರೈಸ್ತ, ಮುಸ್ಲಿಂ, ಬುದ್ದ, ಸಿಖ್ ಧರ್ಮಗಳ ಮೂಲ ತತ್ವಗಳು, ಅವುಗಳ ಉಗಮ, ವಿಶೇಷತೆಗಳ ಬಗ್ಗೆ ಎಳೆ ಎಳೆಯಾಗಿ ವಿಚಾರಗಳನ್ನು ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಕ್ಷೇತ್ರ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಶ್ರೀಮನ್ಮಮಹಾರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಅವರು, ಕರುಣೆ, ಶಾಂತಿ, ಅಹಿಂಸೆ ಇವು ಎಲ್ಲಾ ಧರ್ಮಗಳು ನೀಡುವ ಸಂದೇಶವಾಗಿದ. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಮತಾಂಧತೆಗೆ ಉತ್ತರ ಈ ಸಮ್ಮೇಳನವಾಗಲಿದೆ. ಪ್ರೇಮದ ಭಾವನೆಯಲ್ಲಿ ಜಗತ್ತು ಸ್ವರ್ಗವಾಗುತ್ತದೆ. ಮಾನವನಾಗಿ ಹುಟ್ಟಿ ಮಾನವತ್ವವಿಲ್ಲದೆ ಇರುವುದು ನಿರರ್ಥಕ. ಪ್ರೀತಿ ಇದ್ದಲ್ಲಿ ಸ್ವರ್ಗ. ಮನಸ್ಸಿನಲ್ಲಿ ಸಾಮರಸ್ಯದ ಭಾವನೆಗಳನ್ನು ತುಂಬಿಕೊಳ್ಳಬೇಕು. ಶ್ರೇಷ್ಠ ವಿಶಾಲ ಭಾವನೆಯ ಹಿರಿಯರಿದ್ದರೆ ನಾಡು ಚೆನ್ನಾಗಿರುತ್ತದೆ. ಅಕ್ಕಿ ದಾನ ಮಾಡುವುದು ಸುಲಭ. ಆದರೆ ಅದನ್ನು ಉಣ್ಣಲು ಯೋಗ್ಯವಾಗುವಂತೆ ಮಾಡಿ ದಾಸೋಹ ಮಾಡುವುದು ಅತೀ ಕಷ್ಟ. ಆದರೆ ಈ ಕ್ಷೇತ್ರದಲ್ಲಿ ಅತ್ಯಂತ ಸುಲಲಿತವಾಗಿ ಈ ಕಾರ್ಯವನ್ನು ಡಾ.ಹೆಗ್ಗಡೆಯವರು ಮಾಡಿ ತೋರಿಸಿದ್ದಾರೆ. ಹೆಚ್ಚು ಜನ ಬಂದು ದಾಸೋಹದಲ್ಲಿ ಭಾಗಿಯಾದಷ್ಟು ಅವರಿಗೆ ಸಂತೋಷವಾಗುತ್ತದೆ ಎಂದರು.
ಬಳಿಕ ಜೈನ ಧರ್ಮದಲ್ಲಿ ಸಮನ್ವಯತೆಯ ಬಗ್ಗೆ ನವದೆಹಲಿಯ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಪ್ರಾಕೃತ ವಿಭಾಗ ಮುಖ್ಯಸ್ಥ ಡಾ.ಜಯಕುಮಾರ್ ಎನ್. ಉಪಾಧ್ಯೆ, ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಷಯದಲ್ಲಿ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ, ಕ್ರೈಸ್ತ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಚಾರದಲ್ಲಿ ಧಾರವಾಡ ವಿದ್ಯಾನಿಕೇತನದ ನಿರ್ದೇಶಕ ಫಾ.ಪ್ರಶಾಂತ್ ವೆಸ್ಲಿ ಡಿಸೋಜಾ ಉಪನ್ಯಾಸ ನೀಡಿದರು.
ಸ್ವಾಗತಿಸಿದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು, ಧಾರ್ಮಿಕತೆ ಹೆಚ್ಚಾದಂತೆ ನೈತಿಕತೆ ಹೆಚ್ಚಲಿಲ್ಲವೆನ್ನಿಸುತ್ತಿದೆ. ಧರ್ಮದ ಆಚರಣೆ ನೈತಿಕತೆಯಾಗಿ ಬದಲಾಗಲಿಲ್ಲ. ಪ್ರಜೆಗಳ ವರ್ತನೆಯಲ್ಲಿ ಸ್ವಾರ್ಥ, ವಂಚನೆ, ಅಸೂಯೆ, ದ್ವೇಷ, ಕೊಲೆ, ಸುಲಿಗೆಗಳು ಹೆಚ್ಚಾಗಿವೆಯೇ ? ಧಾರ್ಮಿಕ ಭಾವ, ಭಕ್ತಿ, ಶ್ರದ್ಧೆಗಳು ಹೆಚ್ಚಾಗುವಂತೆ ಮಾಡುವುದರ ಜೊತೆಗೆ ನೈತಿಕತೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ನ್ಯಾಯಾಲಯದಲ್ಲಿಯೂ ಹೃದಯ ವೈಶಾಲ್ಯಕ್ಕೆ ಹೆಚ್ಚು ಒತ್ತು ನೀಡಿ ಹೃದಯ ವಿಕಸನಗೊಂಡಾಗ ಸಮಾಜದಲ್ಲಿ ನೈತಿಕತೆ ಮೂಡಲು ಸಾದ್ಯ ಎಂದ ಅವರು ದೇಶದಲ್ಲಿ ಎಲ್ಲೆಡೆ ಭಕ್ತಿ ಹೆಚ್ಚಾಗಿದೆ. ಆದರೆ ಶಿಸ್ತು ಹೆಚ್ಚಾಗಿಲ್ಲ. ಈ ಸ್ವಚ್ಛತೆಯ ಶಿಸ್ತು ಕ್ಷೇತ್ರಕ್ಕೆ ಆಗಮಿಸುವ ಭಕ್ತರಲ್ಲೂ ಮೂಡಿ ಬಂದರೆ ಧರ್ಮಸ್ಥಳ ಮತ್ತಷ್ಟು ಸ್ವಚ್ಛ ಸುಂದರವಾಗುವ ಆಶಯ ವ್ಯಕ್ತಪಡಿಸಿದರು.
ದೇಶದಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಯುತ್ತಿದೆ. ವಿದ್ಯಾವಂತರು ಹೆಚ್ಚಿರುವ ಪಟ್ಟಣ, ನಗರ ಮಹಾನಗರಗಳಲ್ಲಿಯೂ ಸ್ಚಚ್ಛತೆಯ ಕೊರತೆಯಿದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಜಾಗೃತರಾಗಿ ಸಂಕಲ್ಪ ಮಾಡಿದಲ್ಲಿ ಪಾಠದ ಜೊತೆಗೆ ಪಠ್ಯೇತರ ವಿಷಯವಾಗಿ, ಪರಿಸರವನ್ನು ಸುಂದರವಾಗಿ ಸ್ವಚ್ಛವಾಗಿಡುವುದು ಸಾಧ್ಯ. ಈ ಅಭಿಯಾನದ ಪೂರ್ಣ ಯಶಸ್ಸು ನಮ್ಮೆಲ್ಲರ ಒಗ್ಗಟ್ಟಿನ ಭಾಗವಹಿಸುವಿಕೆಯಿಂದ ಸಾಧ್ಯ ಎಂದರು.
ವೇದಿಕೆಯಲ್ಲಿ ಡಿ. ಹರ್ಷೇಂದ್ರ ಕುಮಾರ್, ಪ್ರೋ.ಎಸ್. ಪ್ರಭಾಕರ್ ಇದ್ದರು. ಉದ್ಘಾಟಕರ ಸನ್ಮಾನ ಪತ್ರವನ್ನು ಸ್ವಾಗತ ಸಮಿತಿ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ವಾಚಿಸಿದರೆ, ಅಧ್ಯಕ್ಷರ ಸನ್ಮಾನ ಪತ್ರವನ್ನು ಉಪನ್ಯಾಸಕ ಸುನಿಲ್ ಪಂಡಿತ್ ವಾಚಿಸಿದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್ ವಂದಿಸಿದರು. ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಡಾ.ಬಿ.ಪಿ.ಸಂಪತ್ ಕುಮಾರ್ ನಿರ್ವಹಿಸಿದರು.
ಇದಕ್ಕೂ ಮೊದಲು ಹೆಗ್ಗಡೆ ಅವರ ಬೀಡುವಿನಿಂದ ಅತಿಥಿ ಗಣ್ಯರನ್ನು ಆನೆ, ನಿಶಾನೆ, ಕೊಂಬುಗಳಿಂದ ಒಡಗೂಡಿದ ಮೆರವಣಿಗೆಯಲ್ಲಿ ಕರೆತರಲಾಯಿತು.
ಗಣ್ಯರ ಮಾತು:
ರಾಜ್ಯದಲ್ಲಿರುವ ಗುಡಿ, ದೇವಸ್ಥಾನಗಳ ಸ್ವಚ್ಛತೆಯ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಶೇಷ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣಯಾನ ಮುಗಿಯುವುದರ ಒಳಗೆ ಅಂದರೆ ಮುಂದಿನ ಮಕರ ಸಂಕ್ರಾಂತಿಯೊಳಗೆ ರಾಜ್ಯದ ಎಲ್ಲಾ ದೇವಸ್ಥಾನಗಳ ಒಳಗೆ ಮತ್ತು ಹೊರಗೆ ಶುದ್ದೀಕರಣ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು. ಇದನ್ನು ಯೋಜನೆಯ 18,000 ಒಕ್ಕೂಟಗಳ 35 ಲಕ್ಷ ಸದಸ್ಯರ ಮೂಲಕ ಮಾಡಲಾಗುವುದು. ಬಳಿಕ ಅಲ್ಲಿ ನಿತ್ಯವೂ ಸ್ವಚ್ಛತೆಯ ಬಗ್ಗೆ ನಿತ್ಯವೂ ಗಮನಿಸುವಂತೆ ಆಯಾ ದೇವಸ್ಥಾನಕ್ಕೆ ಸಂಬಂಧಪಟ್ಟವರ ಮೂಲಕ ಪ್ರಯತ್ನಿಸಲಾಗುವುದು. ಅಲ್ಲದೆ ನೀರಿನ ಅಭಾವನ್ನು ಗಮನಿಸಿ ಯೋಜನೆಯ ಮೂಲಕ ರಾಜ್ಯದ 100 ಕೆರೆಗಳ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ 2015-16ರಲ್ಲಿ 25 ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ಸಿಗುವಂತೆ ಮಾಡಲಾಗಿದೆ – ಡಾ.ಹೆಗ್ಗಡೆ
ಭಾವೈಕ್ಯತೆಯ ಸಮಾಜಕ್ಕಾಗಿ ಸಹಿಷ್ಣುತೆ ಇಂದಿನ ಅತೀ ಅವಶ್ಯಕತೆಗಳಲ್ಲಿ ಒಂದು. ಸಾಮಾನ ನಾಗರಿಕ ಸಂಹಿತೆಯ ಅವಶ್ಯಕತೆ ಇದೆ. ಇದು ಶಾಸಕಾಂಗದ ಹೊಣೆಗಾರಿಕೆಯಾಗಿದೆ. ಗೋವಾದಲ್ಲಿ ಈಗಾಗಲೇ ಈ ಸಂಹಿತೆ ಜಾರಿಯಲ್ಲದೆ – ಗೋಪಾಲ ಗೌಡ.
ರತ್ನವರ್ಮ- ರತ್ನಮ್ಮ ದಂಪತಿ ಪುತ್ರ ಡಾ. ಹೆಗ್ಗಡೆಯವರು ಮಹಾರತ್ನ. ಅವರಿಗೆ ಭಾರತ ರತ್ನ ಸಿಗುವಂತಾಗಲಿ- ಶಿರಹಟ್ಟಿ ಶ್ರೀ
ಹೆಗ್ಗಡೆಯವರ ನಾಯಕತ್ವದ ವಿವಿದ ಸೇವೆಗಳ ಆಧಾರದಲ್ಲಿ ಮತ್ತು ಕ್ಷೇತ್ರದ ಮೇಲೆ ಹಾಗೂ ಹೆಗ್ಗಡೆಯವರ ಮೇಲಿನ ನಂಬಿಕೆಯ ಮೇಲೆ ಧರ್ಮಸ್ಥಳ ಕ್ಷೇತ್ರ ಪ್ರಖ್ಯಾತಿ ಹೊಂದಿದೆ- ಗೋಪಾಲ ಗೌಡ