ಬಂಟ್ವಾಳ: ಅಮ್ಮುಂಜೆ ಗ್ರಾಮದ ಕಲಾಯಿ ಮತ್ತು ಮಲ್ಲೂರು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹುಚ್ಚು ನಾಯಿಗಳ ಹಾವಳಿಯು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.
ಶುಕ್ರವಾರ ಹಾಗೂ ಶನಿವಾರ ಮಕ್ಕಳ ಸಹಿತ ಒಟ್ಟು 6 ಮಂದಿಗೆ ಹಾಗೂ 5 ಜಾನುವಾರುಗಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಇಲ್ಲಿನ ಶಂಕರ್ ಎಂಬವರ ಪುತ್ರ ತಮ್ಮು, ಮೋನಪ್ಪ ಪೂಜಾರಿ ಪುತ್ರಿ ಅನಿತ, ಶಫೀಯ ಎಂಬವರ ಸಹಿತ ನಾಲ್ಕು ಮಂದಿಗೆ ಹಾಗೂ ಶನಿವಾರ ಇಬ್ಬರು ಶಾಲಾ ಮಕ್ಕಳಿಗೆ ಹುಚ್ಚು ನಾಯಿ ಕಡಿದಿದ್ದು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ಬಶೀರ್, ರಜಿತ್ ಶೆಟ್ಟಿ, ಹನೀಫ್ ಎಂಬವರಿಗೆ ಸೇರಿದ ಜಾನುವಾರುಗಳಿಗೆ ಕೂಡಾ ಈ ಹುಚ್ಚು ನಾಯಿಗಳು ಕಡಿದು ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.
ಗ್ರಾಮದ ಕಲಾಯಿ ಮತ್ತು ಮಲ್ಲೂರು ಪರಿಸರದಲ್ಲಿ ಸುಮಾರು 4ರಿಂದ 5 ಹುಚ್ಚು ನಾಯಿಗಳು ಓಡಾಡುತ್ತಿದ್ದು ಕಂಡವರ ಮೈಮೇಲೆ ಎರಗಲು ಪ್ರಯತ್ನಿಸುತ್ತಿದ್ದು ಗ್ರಾಮಸ್ಥರು ಹಾಗೂ ಮಕ್ಕಳು ರಸ್ತೆಗಿಳಿಯಲು ಭಯ ಪಡುತ್ತಿದ್ದಾರೆ. ಈ ಹುಚ್ಚು ನಾಯಿಗಳ ಪೈಕಿ ಒಂದು ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದು ಹಾಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹುಚ್ಚು ನಾಯಿ ಹಾವಳಿಯ ಬಗ್ಗೆ ಸ್ಥಳೀಯ ಪಂಚಾಯತ್ ಗೆ ಗ್ರಾಮಸ್ಥರು ದೂರು ನೀಡಿದ್ದರೂ ಪಂಚಾಯತ್ ಇದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.