ಬೆಳ್ತಂಗಡಿ: ನೇತ್ರಾವತಿ ನದಿ ಉಳಿಸಲು ಎತ್ತಿನ ಹೊಳೆ ಯೋಜನೆ ವಿರೋಧಿಸಿ ನಡೆಯುತ್ತಿರುವ ಇಂದು ಆರಂಭವಾದ ಹೋರಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಡು ನೀಡಿದಂತಾಗಲಿದೆ. ನದಿಗಾಗಿ ಪೂರ್ಣಪ್ರಮಾಣದ ನೂರು ಹೋರಾಟಗಾರರು ಸಿದ್ಧರಾದಲ್ಲಿ ರಾಜ್ಯ ಸರಕಾರವನ್ನು ಉರುಳಿಸಲು ಸಾಧ್ಯ ಎಂದು ಯಾತ್ರೆ ಸಮಿತಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಅವರು ಶನಿವಾರ ಧರ್ಮಸ್ಥಳದಲ್ಲಿ ಎತ್ತಿನಹೊಳೆ ವಿರೋಧಿಸಿ-ನೇತ್ರಾವತಿ ಉಳಿಸಿ ಸಮಿತಿಯ ವತಿಯಿಂದ ಪಂಚತೀರ್ಥ- ಸಪ್ತಕ್ಷೇತ್ರ ರಥಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ನೇತ್ರಾವತಿ ನದಿ ಎಂಬುದು ಯಾವೂದೇ ಪಕ್ಷಕ್ಕೆ ಸಂಬಂಧಿಸಿದಲ್ಲ. ಇದು ಜಿಲ್ಲೆಯ ಜನರ ಜನರ ಸ್ವತ್ತು. ಎತ್ತಿನಹೊಳೆ ವಿರೋಧಿ ಹೋರಾಟ ಯಾವೂದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇದು ನಮ್ಮ ಜಿಲ್ಲೆಯ ಜನತೆಯ ಬದುಕಿನ ಪ್ರಶ್ನೆ ಎತ್ತಿನಹೊಳೆ ಯೋಜನೆ ಹಣ ಮಾಡುವ ಯೋಜನಯೇ ಹೊರತು ಯಾರಿಗೂ ನೀರು ಕೊಡುವ ಉದ್ದೇಶ ಇದರಲ್ಲಿ ಇಲ್ಲ ಎಂದ ಅವರು, ನಿಮ್ಮ ಮನೆಮಂದಿ ನೇತ್ರಾವತಿಯ ನೀರೇ ಕುಡಿಯುವುದು. ನಿಮಗೆ ಅಧಿಕಾರ, ಹಣ, ಓಟು ಬೇಕಾ ಇಲ್ಲ ಜಿಲ್ಲೆಯ ಜನತೆ ಬೇಕಾ ಎಂಬುದನ್ನು ತೀರ್ಮಾನಿಸಿ. ಜಿಲ್ಲೆಯ ಉಳಿವಿಗಾಗಿ, ನೇತ್ರಾವತಿಗಾಗಿ ಜಿಲ್ಲೆಯ ಶಾಸಕರು ಸಹಿತ ನೀವೂ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಜಿಲ್ಲೆಯ ಸಚಿವರನ್ನು ಎಚ್ಚರಿಸಿದರು.
ರಥಯಾತ್ರೆಯ ಸಂಚಾಲಕ ಮೋನಪ್ಪ ಭಂಡಾರಿ ಮಾತನಾಡಿ, ಯೋಜನೆಯು ಭ್ರಷ್ಟಾಚಾರದ ಕೂಪವಾಗಿದ್ದು, ಗುತ್ತಿಗೆದಾರರಿಂದ ರಾಜ್ಯದ ಮೂವರು ಮಂತ್ರಿಗಳಿಗೆ 500 ಕೋಟಿ ಲಂಚ ನೀಡಲಾಗಿದೆ ಎಂದು ಆರೋಪಗಳು ಕೇಳಬರುತ್ತಿದೆ. ಆ ಮಂತ್ರಿಗಳು ಯಾರು ಎಂದು ಬಹಿರಂಗವಾಗಬೇಕು ಜಿಲ್ಲೆಯ ಉಸ್ತುವಾರಿ ಸಚಿವರು ಬಿಜೆಪಿಯವರು ನಿಲುವಳಿ ಮಂಡಿಸಲಿ ಎಂದು ಸವಾಲು ಹಾಕುತ್ತಿದ್ದಾರೆ. ಸಚಿವರೇ ನಮಗೆ ನಿಲುವಳಿ ಬೇಡ. ನೀವು ಕೂಡಾ ಈ ಜಿಲ್ಲೆಯವರು. ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಿ ಎಂದು ಹೇಳುವ ನೀವು ವಿಧಾನ ಪರಿಷತ್ ನಲ್ಲಿ ಗಣೇಶ್ ಕಾರ್ಣಿಕ್ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದಾಗ ಯಾಕೆ ಬೆಂಬಲಿಸಲಿಲ್ಲ. ಆಗ ಎಲ್ಲಿಗೆ ಹೋಗಿತ್ತು ನಿಮ್ಮ ಜಿಲ್ಲೆಯ ಕಾಳಜಿ ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷರುಗಳಾದ ಪಿ.ಎಂ. ರಹೀಂ ಬಂಟ್ವಾಳ, ಉಮಾನಾಥ ಕೋಟ್ಯಾನ್, ಪ್ರಭಾಕರ ಬಂಗೇರ, ಭುಜಬಲಿ ಧರ್ಮಸ್ಥಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಚಿತ್ರಾಪುರ, ಸಹ ಸಂಚಾಲಕರಾದ ದಿನಕರ ಶೆಟ್ಟಿ, ಸತ್ಯಜಿತ್ ಸುರತ್ಕಲ್, ನಿರ್ವಹಣೆ ಸಮಿತಿಯ ದೇವದಾಸ್ ಶೆಟ್ಟಿ, ಎಂ.ಜಿ. ಹೆಗ್ಡೆ, ಶಶಿರಾಜ ಶೆಟ್ಟಿ ಕೊಳಂಬೆ, ಉಪಾಧ್ಯಕ್ಷರುಗಳಾದ ಜೀತೇಂದ್ರ ಕೊಟ್ಟಾರಿ, ರವೀಂದ್ರ ಶೆಟ್ಟಿ, ರಾಮಚಂದ್ರ ಬೈಕಂಪಾಡಿ, ಶ್ರೀಧರ್ ಬಿಢೆ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವೇದಾವತಿ, ಸುಲೋಚನಾ ಭಟ್, ಪಾಶ್ರ್ವನಾಥ್, ಹರೀಶ್ ರಾವ್ ಮತ್ತಿತರರು ವೇದಿಕೆಯಲ್ಲಿದ್ದರು.
ಹೋರಾಟ ಸಮಿತಿ ಬೆಳ್ತಂಗಡಿ ತಾಲೂಕಾಧ್ಯಕ್ಷ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು. ರಂಜನ್ ಜಿ. ಗೌಡ ವಂದಿಸಿದರು.
– ಕೇವಲ ಹಳ್ಳಿಯ ಜನತೆ ಎತ್ತಿನಹೊಳೆ ವಿರುದ್ಧ ಹೋರಾಟ ನಡೆಸಿದರೆ ಸಾಲದು. ಮಂಗಳೂರಿನ ಪ್ಲಾಟ್ ಗಳಲ್ಲಿ ವಾಸಿಸುವ ಬಂಧು ಭಗಿನಿಯರಿಗೆ ನೇತ್ರಾವತಿ ನದಿ ನೀರೇ ಆಧಾರ. ಹೀಗಾಗಿ ಅವರೂ ಈ ಹೋರಾಟದಲ್ಲಿ ಕೈ ಜೋಡಿಸಬೇಕು.- ಬಿ.ಕೆ. ಧನಂಜಯ ರಾವ್. ಸಮಿತಿ ಉಪಾಧ್ಯಕ್ಷರು.
– ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರು, ಎತ್ತಿನಹೊಳೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರೇ ರಾಜೀನಾಮೆ ನೀಡಿ. ಸರಕಾರಕ್ಕೆ ಬಿಸಿ ಮುಟ್ಟಿಸಿ- ಉಮಾನಾಥ ಕೋಟ್ಯಾನ್.
-ರಥಯಾತ್ರೆ ಅಮೋಘ ಬೆಂಬಲ ವ್ಯಕ್ತವಾಗಿದೆ. ಸ್ಪಷ್ಟವಾದ ಗುರಿ ಮತ್ತು ದಾರಿ ಈ ರಥಯಾತ್ರೆಯಲ್ಲಿ ಉಂಟಾಗಿದೆ. ಜನವರಿ 26ರ ಮೊದಲು ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ತೀವ್ರವಾಗಲಿದೆ- ನಳಿನ್ ಕುಮಾರ್ ಕಟೀಲು ಸಂಸದರು.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಳದ ಎದರು ಕಲಶಕ್ಕೆ ಪೂಜೆ, ಆರತಿ ನೆರವೇರಿತು. ಪುಷ್ಪಾರ್ಚನೆಯನ್ನು ಮಾಡಲಾಯಿತು. ದೇವಸ್ಥಾನದ ಹೊರಾಂಗಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಧರ್ಮಸ್ಥಳದಿಂದ ಹೊರಟ ಬಳಿಕ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ರಥಯಾತ್ರೆಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಸ್ವಾಗತಿಸಿ, ಪೂಜೆ ನೆರವೇರಿಸಿದರು. ಅಲ್ಲಿಂದ ಯಾತ್ರೆಯು ಉಜಿರೆಯಲ್ಲಿ ತಂಗಿತು.