ಬಂಟ್ವಾಳ : ಖಾಸಗಿ ಬಸ್ಸೊಂದು ಲಾರಿ ಹಾಗೂ ಗೂಡಾಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಗೂಡಾಂಗಡಿ ಧ್ವಂಸಗೊಂಡು ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಇಳಂತಿಲ ನಿವಾಸಿ ರಾಮಕೃಷ್ಣ (34) ಎಂಬವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಖಾಸಗಿ ಬಸ್ ತೆರಳುತ್ತಿದ್ದ ವೇಳೆ ಮಾಣಿ ಜಂಕ್ಷನ್ನಲ್ಲಿ ನಿಂತಿದ್ದ ಲಾರಿ ದಿಢೀರನೇ ರಸ್ತೆಗೆ ಇಮ್ಮುಖವಾಗಿ ಚಲಿಸಿದ ಪರಿಣಾಮ ಬಸ್ಸಿನ ಚಾಲಕನ ನಿಯಂತ್ರಣ ಕಳೆದು ಲಾರಿಯ ಬಾಗಿಲಿಗೆ ಬಳಿಕ ರಸ್ತೆ ಬದಿಯಲ್ಲಿದ್ದ ಗೂಡಾಂಗಡಿಗೆ ಡಿಕ್ಕಿ ಹೊಡೆದು ಗೂಡಾಂಗಡಿಯನ್ನು ಎಳೆದುಕೊಂಡು ಹೋಗಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಘಟನೆಯಲ್ಲಿ ಗೂಡಾಂಗಡಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ರಾಮಕೃಷ್ಣ ಅವರನ್ನು 108 ವಾಹನ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೂಡಾಂಗಡಿ ಯಾಕುಬು ಎಂಬವರಿಗೆ ಸೇರಿದ್ದಾಗಿದ್ದು, ಅವರು ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 7 ಗಂಟೆ ವರೆಗೆ ಇಲ್ಲಿ ಚಾ ಮಾರಾಟ ಮಾಡುತ್ತಿದ್ದು, ಈ ಘಟನೆ ನಡೆಯುವುದಕ್ಕಿಂತ 10 ನಿಮಿಷ ಮೊದಲು ಇಲ್ಲಿಂದ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.