ಪುತ್ತೂರು: ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ನೊಂದ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದ ಬೊಳ್ಳಾವು ಎಂಬಲ್ಲಿ ನಡೆದಿದೆ.
ಬೊಳ್ಳಾವು ನಿವಾಸಿ ದಿ. ತಿಮ್ಮಪ್ಪ ಗೌಡರ ಪುತ್ರ ರಾಮಚಂದ್ರ ಯಾನೆ ರಮೇಶ (38ವ) ಹಾಗೂ ಆತನ ತಾಯಿ ಸೇಸಮ್ಮ (62ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಬುಧವಾರ ರಾಮಚಂದ್ರ ಅವರು ತನ್ನ ಮನೆ ಬಳಿಯ ಷೆಡ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀರಾ ಅಸ್ವಸ್ಥರಾಗಿ ಬಿದ್ದಿದ್ದ ಇವರನ್ನು ಸಂಜೆ ಮನೆಯವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ -ಫಲಕಾರಿಯಾಗದೆ ರಮೇಶ್ ಅವರು ರಾತ್ರಿ 10:30ರ ಸುಮಾರಿಗೆ ಮೃತಪಟ್ಟಿದ್ದರು. ಆ ತನಕ ಆಸ್ಪತ್ರೆಯಲ್ಲಿ ಮಗನೊಂದಿಗಿದ್ದ ತಾಯಿ ಸೇಸಮ್ಮ ಅವರು ಬಳಿಕ ರಾತ್ರಿ 11:30ರ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆಗಮಿಸಿ, “ಕೆಲಸದ ವಿಷಯದಲ್ಲಿ ತನ್ನ ಮಗ ಹಾಗೂ ಸೊಸೆಗೆ ಮನೆಯಲ್ಲಿ ದಿನನಿತ್ಯ ಜಗಳಗಳಾಗುತ್ತಿದ್ದು, ಇದರಿಂದ ನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿ ಬೊಳ್ಳಾವಿನ ಮನೆಗೆ ತೆರಳಿದ್ದರು. ಮನೆಯಲ್ಲಿ ಮಲಗಿದ್ದ ಇವರು ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ನೋಡಿದಾಗ ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿರುವುದನ್ನು ಸೊಸೆ ನೋಡಿದ್ದು, ಕೂಡಲೇ ಸ್ಥಳೀಯರ ನೆರವಿನಿಂದ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. “ಮಗನ ಸಾವಿನಿಂದ ನೊಂದ ಅತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಸೊಸೆ ವಸಂತಿ ನೀಡಿದ ಹೇಳಿಕೆಯನ್ನು ಉಪ್ಪಿನಂಗಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೇಸಮ್ಮರಿಗೆ ಮೃತ ರಾಮಚಂದ್ರ ಅವರು ಏಕೈಕ ಪುತ್ರನಾಗಿದ್ದು, ಉಳಿದಿಬ್ಬರು ಪುತ್ರಿಯರು. ಅವರನ್ನು ವಿವಾಹ ಮಾಡಿಕೊಡಲಾಗಿದೆ. ಮೃತ ರಾಮಚಂದ್ರರಿಗೆ ಪತ್ನಿ ವಸಂತಿ ಹಾಗೂ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿ ಹರ್ಷಿತಾ, ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತೀಕ್ಷಾ ಹಾಗೂ ಒಂದು ವರ್ಷ ಒಂಭತ್ತು ತಿಂಗಳಿನ ಹಸುಳೆ ಅಮೂಲ್ಯ ಇದ್ದಾರೆ.
ಗುರುವಾರ ತಾಯಿ- ಮಗನ ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಗೆ ತಂದು ಅಕ್ಕಪಕ್ಕದಲ್ಲೇ ಚಿತೆ ನಿರ್ಮಿಸಿ ತಾಯಿ-ಮಗನ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಕೆಲ ದಿನಗಳಿಂದ ನೊಂದಿದ್ದ: ಈತನ ಸ್ನೇಹಿತರು ಹೇಳುವಂತೆ, “ಯಾರ ತಂಟೆಗೂ ಹೋಗದೆ ತಾನಾಯಿತು, ತನ್ನ ಕೆಲಸವಾಯಿತು ಎಂದು ಬದುಕುತ್ತಿದ್ದ ರಾಮಚಂದ್ರ ಪಿಯುಸಿ ಬಳಿಕ ಐಟಿಐ ಶಿಕ್ಷಣ ಮುಗಿಸಿ, ಗಾರೆ ಮೇಸಿಯಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಯಾವುದೋ ಒಂದು ಕಾರಣದಿಂದ ವಿಪರೀತ ಮದ್ಯವ್ಯಸನಿಯಾಗಿದ್ದ ಈತ ಮತ್ತೆ ಮನಪರಿವರ್ತನೆಗೊಂಡು ಮದ್ಯಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ದರು. ಅಲ್ಲದೇ, ಗಾರೆ ಕೆಲಸದೊಂದಿಗೆ ಮನೆಯಲ್ಲಿದ್ದ ಕೃಷಿಯನ್ನೂ ಅಭಿವೃದ್ಧಿ ಪಡಿಸಿದ್ದರು. ಓಡಾಡಲು ಕಾರು, ಬೈಕ್ ಕೊಂಡುಕೊಂಡು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಹಲವು ವರ್ಷಗಳ ಬಳಿಕ ಇತ್ತೀಚೆಗೆ ಕಳೆದ 15 ದಿನಗಳಿಂದ ಜೀವನದಲ್ಲಿ ನೊಂದು ಮತ್ತೆ ಮದ್ಯಸೇವನೆ ಆರಂಭಿಸಿದ್ದ ರಾಮಚಂದ್ರ ಯಾನೆ ರಮೇಶ ಬುಧವಾರ ತಾನು ಕೆಲಸಕ್ಕೆ ರಜೆ ಹಾಕಿ, ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬೈಕ್ ನಲ್ಲಿ ಬಿಟ್ಟಿದ್ದ. ಅವರು ಬೈಕ್ ಇಳಿಯುವಾಗ “ ನನ್ನ ಬೈಕ್ ನಲ್ಲಿ ನೀವು ಬರುವುದು ಇದೇ ಕೊನೆ” ಎಂದಿದ್ದರು. ಬಳಿಕ ಈತ ಮನೆಗೆ ಬಂದು ಈ ಕೃತ್ಯವೆಸಗಿದ್ದಾರೆ. ಮೃತ ರಾಮಚಂದ್ರನ ಪತ್ನಿ ವಸಂತಿ ಗ್ರಾಮಾಭಿವೃದ್ಧಿ ಸಂಸ್ಥೆಯೊಂದರಲ್ಲಿ ಸೇವಾನಿರತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವಿಷಯವಾಗಿ ಪತಿ-ಪತ್ನಿಗೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿದ್ದು, ಇದುವೇ ಈತನ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.