ಬೆಳ್ತಂಗಡಿ: ನಿಲ್ಲಿಸಿದ್ದ ರಿಕ್ಷಾವೊಂದು ಅಚಾನಕ್ ಆಗಿ ಚಲಿಸಿದ ಪರಿಣಾಮ ಗುಂಡಿಗೆ ಬಿದ್ದು, ಚಾಲಕನ ಮಗು ಮೃತಪಟ್ಟ ದಾರುಣ ಘಟನೆ ಚಾರ್ಮಾಡಿಯಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಸ್ಥಳೀಯ ನಿವಾಸಿ ಖಲಂದರ್ ಎಂಬವರ ಪುತ್ರ ಮೂರು ವರ್ಷದ ಮಗು ಖಲೀಲುದ್ದೀನ್ ಎಂಬ ಬಾಲಕನೇ ಮೃತಪಟ್ಟವನು. ಖಲಂದರ್ ಅವರು ಚಾರ್ಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಂಗನವಾಡಿ ಕೇಂದ್ರದಿಂದ ಮಕ್ಕಳನ್ನು ಕರೆದೊಯ್ಯಲು ಬಂದಿದ್ದರು. ಅವರು ರಿಕ್ಷಾವನ್ನು ನಿಲ್ಲಿಸಿ ಹೋಗಿದ್ದ ಸಂದರ್ಭ ಏಕಾಏಕಿ ರಿಕ್ಷಾ ಚಲಿಸಿ ಸುಮಾರು 20 ಅಡಿ ಆಳದ ಗುಂಡಿಗೆ ಬಿದ್ದು ರಿಕ್ಷಾದಲ್ಲಿದ್ದ ಅವರ ಮೂರು ವರ್ಷದ ಮಗು ಸಾವನ್ನಪ್ಪಿದೆ.
ಅಂಗನವಾಡಿಯಿಂದ ಮಗನನ್ನು ಕರೆತಂದು ರಿಕ್ಷಾದಲ್ಲಿ ಕುಳ್ಳಿರಿಸಿ ಖಲಂದರ್ ಅವರು ನೆರೆಮನೆಯ ಮಕ್ಕಳಿದ್ದರೆ ಅವರನ್ನು ಕರೆದುಕೊಂಡು ಬರಲು ಅಂಗನವಾಡಿಗೆ ಹೋಗಿದ್ದ ಸಂದರ್ಭ ರಿಕ್ಷಾ ಏಕಾಏಕಿ ಚಲಿಸಿ ಸಮೀಪವಿರುವ ಬಾವಿಯ ಬದಿಯಿರುವ ಗುಂಡಿಗೆ ಬಿದ್ದಿದೆ. ಗಂಭೀರಗೊಂಡ ಮಗುವನ್ನು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದೆ. ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರೋಶ : ಅಂಗನವಾಡಿಗೆ ಹೋಗುವ ರಸ್ತೆ ಅಪಾಯಕಾರಿಯಾಗಿದ್ದು ಈ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ತಿಂಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದರು. ಒಂದು ವರ್ಷ ಕಳೆದರೂ ಇದುವರೆಗೆ ದುರಸ್ಥಿಗೊಳಿಸಿಲ್ಲ. ಅಂಗನವಾಡಿಗೆ ಹೋಗಬೇಕಾದರೂ ಈ ಕಿರಿದಾದ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಇದೀಗ ಈ ಘಟನೆ ನಡೆದ ಬಳಿಕ ಸಾರ್ವಜನಿಕರು ಆಕ್ರೋಶಗೊಂಡಿದ್ದು ತಕ್ಷಣ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.