ಕಾಸರಗೋಡು: ಸುಪ್ರೀಂ ಕೋರ್ಟ್ ಆದೇಶದಂತೆ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಪರಿಹಾರ ಧನವನ್ನು ಮಾರ್ಚ್ 30ರೊಳಗೆ ವಿತರಿಸಲಾಗುವುದು ಎಂದು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯಲ್ಲಿ ಮಾತನಾಡುತ್ತಿದ್ದರು. ಸಂತ್ರಸ್ಥರಿಗೆ ಮೂರು ತಿಂಗಳೊಳಗೆ ತಲಾ ಐದು ಲಕ್ಷ ರೂ. ವಿತರಿಸಬೇಕು ಎಂದು ಜನವರಿ ಹತ್ತರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಪ್ರಥಮ ಹಂತದ ಪರಿಹಾರವನ್ನು ಶೀಘ್ರ ವಿತರಿಸಲು ಸಭೆ ತೀರ್ಮಾನ ತೆಗೆದುಕೊಂಡಿತು.
ಎಂಡೋ ಸಂತ್ರಸ್ತರಿಗಾಗಿ ಎಪ್ರಿಲ್ ನಾಲ್ಕರಿಂದ ಒಂಭತ್ತರ ತನಕ ಐದು ಕೇಂದ್ರಗಳಲ್ಲಿ ವೈದ್ಯಕೀಯ ಶಿಬಿರ ನಡೆಸಲು ಸಭೆ ತೀರ್ಮಾನ ತೆಗೆದುಕೊಂಡಿತು.
ಸಭೆಯಲ್ಲಿ ಶಾಸಕ ಎನ್. ಎ ನೆಲ್ಲಿಕುನ್ನು, ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ. ಸಿ ಬಷೀರ್, ಎಂಡೋ ಸೆಲ್ ವಿಭಾಗದ ಉಪ ಜಿಲ್ಲಾಧಿಕಾರಿ ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು.