ಬೆಳ್ತಂಗಡಿ: ಚಿನ್ನಾಭರಣದ ಕಳ್ಳತನದ ಪ್ರಕರಣವೊಂದನ್ನು ಧರ್ಮಸ್ಥಳ ಠಾಣೆಯ ಪೋಲಿಸರು ಭೇಧಿಸಿದ್ದು ಆರೋಪಿಯನ್ನು ಚಿನ್ನಾಭರಣಗಳ ಸಮೇತ ಗುರುವಾರ ಬಂಧಿಸಿದ್ದಾರೆ.
2017ರ ಮಾ. 21 ರಂದು ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ಓಬಯ್ಯ ನಾಯ್ಕ ಅವರು, ತಾನು ಹಾಗೂ ತನ್ನ ಪತ್ನಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿ ಯಾರೋ ಕಳ್ಳರು ನುಗ್ಗಿ ಮನೆಯ ಕಪಾಟಿನಲ್ಲಿದ್ದ ಸುಮಾರು 6 ರಿಂದ 8 ಪವನ್ ನಷ್ಟು ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೋಲಿಸರು ತನಿಖೆ ನಡೆಸುತ್ತಿದ್ದರು.
ತನಿಖೆ ನಡೆಸುತ್ತಿದ್ದ ಬೆಳ್ತಂಗಡಿ ಪೋಲಿಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ತಂಡವು ಗುರುವಾರ ಬಂಟ್ವಾಳ ತಾಲೂಕಿನ ಕಾವಳಕಟ್ಟೆ, ಸಾರಬಳಿ ಮನೆಯ ಬಾಲಕೃಷ್ಣ ಕುಲಾಲ್ (33) ಎಂಬಾತನನ್ನು ಉಜರೆಯಲ್ಲಿ ಪತ್ತೆ ಹಚ್ಚಿ ಅತನಿಂದ ಸುಮಾರು 1,50,00 ಮೌಲ್ಯದ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.