ಕಾಸರಗೋಡು: ಮದ್ರಸ ಶಿಕ್ಷಕ ರಿಯಾಜ್ ಮೌಲವಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯನ್ನು ಕಾಸರಗೋಡು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿಗಳಾದ ಕೇಳುಗುಡ್ಡೆ ಅಯ್ಯಪ್ಪನಗರದ ಅಜೇಶ್ (20), ನಿತಿನ್ (19) ಮತ್ತು ಕೇಳುಗುಡ್ಡೆ ಗಂಗೈ ರಸ್ತೆಯ ಅಖಿಲೇಶ್(25) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಆರೋಪಿಗಳಿಗೆ ಜಾಮೀನು ನೀಡುವ ಬಗ್ಗೆ ಪ್ರಾಸಿಕ್ಯೂಶನ್ ವಿರೋಧಿಸಿತು. ಸ್ಪೆಷಲ್ ಪ್ರಾಸಿಕ್ಯೂಟರ್ ನ್ಯಾಯವಾದಿ ಅಶೋಕನ್ ಹಾಜರಾಗಿದ್ದರು. ಎರಡು ಬಾರಿ ಮುಂದೂಡಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು (ಶನಿವಾರ) ನಡೆಯಿತು.
ಮಾರ್ಚ್ 21 ರಂದು ರಾತ್ರಿ ಹಳೆ ಸೂರ್ಲುವಿನ ಮದ್ರಸ ಶಿಕ್ಷಕನಾಗಿದ್ದ ರಿಯಾಜ್ ಮೌಲವಿಯವರನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈಯ್ಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ಸಾವಿರ ಪುಟಗಳುಳ್ಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ.