ಬೆಳ್ತಂಗಡಿ: ತಮ್ಮ ಮಕ್ಕಳಿಗೆ ಪೌಷ್ಠಿಕಾಂಶ ಆಹಾರಗಳನ್ನು ನೀಡಲು ತಾಯಂದಿರು ಆಹಾರ ತಜ್ಞರಾಗುವ ಅವಶ್ಯಕತೆ ಇದೆ. ಪ್ರಸ್ತುತ ಪಾಶ್ಚಾತ್ಯ ಆಹಾರ ಪದ್ದತಿ ಅವಲಂಬನೆ ಹೆಚ್ಚಾಗುತ್ತಿದ್ದು, ಭಾರತೀಯ ಮೂಲ ಆಹಾರ ಮರೆಯಾಗುತ್ತಿದೆ. ಸಿರಿಧಾನ್ಯದಂತಹ ಪಾರಂಪರಿಕ ಆಹಾರ ಪದ್ದತಿಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಟ್ರಸ್ಟಿ ಶ್ರದ್ಧಾ ಅಮಿತ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ಸಿರಿಧಾನ್ಯ ಕೆಫೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಆಹಾರ ಕ್ರಮ ಅನುಸರಿಸಲು ಈಗಿನ ತಾಯಂದಿರು ಪೌಷ್ಟಿಕಾಂಶದ ಪಟ್ಟಿಯನ್ನೇ ಸಿದ್ದಪಡಿಸಿರುತ್ತಾರೆ. ಆದರೂ ಸಣ್ಣ ವಯಸ್ಸಲ್ಲೇ ಆರೋಗ್ಯ ಹದಗೆಡುವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಮೂಲ ಕಾರಣ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯ ಬಗೆಗಿನ ನಿರ್ಲಕ್ಷ್ಯ ಹಾಗೂ ಪಾಶ್ಚಾತ್ಯ ಆಹಾರಗಳ ಅವಲಂಬನೆ ಕಾರಣ. ಈ ನಿಟ್ಟಿನಲ್ಲಿ ಭಾರತೀಯರ ಮೂಲ ಆಹಾರ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸ ನಮ್ಮೆಲ್ಲರಿಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಡಳಿತ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್, ಧರ್ಮಸ್ಥಳ ಸಂಸ್ಥೆ ಧಾರವಾಡದಲ್ಲಿ ಸುಮಾರು ರೂ.3 ಕೋಟಿಯ ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣೆ, ಲ್ಯಾಬೋರೆಟರಿ ನಿರ್ಮಿಸಲಾಗಿದ್ದು, ಸಿರಿಧಾನ್ಯದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಸಿರಿಧಾನ್ಯ ಬಳಕೆಯಿಂದ ಇದನ್ನು ಬೆಳೆದ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ಜಿಲ್ಲೆಯ ಉಷ್ಣಾಂಶಕ್ಕನುಗುಣವಾಗಿ ದೇಹಕ್ಕೆ ತಂಪು ನೀಡುವ ಸಿರಿಧಾನ್ಯ ಬಳಕೆ ಅನುಕೂಲಕರ. ಇದಕ್ಕಾಗಿ ಸಿರಿಧಾನ್ಯ ಕೆಫೆ ಪ್ರಾರಂಭಿಸಲಾಗಿದೆ ಎಂದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸಿರಿಧಾನ್ಯ ಆಹಾರ ತಜ್ಞೆ ಡಾ| ಶಕುಂತಲಾ ಸವದತ್ತಿ ಮೈಸೂರು ಹಾಗೂ ಸಾವಯವ ಕೃಷಿಕ ಭದ್ರಾವತಿಯ ಈಶ್ವರನ್ ಪಿ.ತೀರ್ಥ ಅವರು ಸಿರಿ ಧಾನ್ಯ ಬಳಕೆಯ ಲಾಭ ಹಾಗೂ ಪ್ರಯೋಜನ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಕಾರ್ಯದರ್ಶಿ ಬಿ.ಯಶೋವರ್ಮ, ಸೋನಿಯಾ ವರ್ಮ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಬೂದಪ್ಪ ಗೌಡ, ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾ ರಾವ್, ಜನ ಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್, ಹಿರಿಯ ಮಾರುಕಟ್ಟೆ ಪ್ರಬಂಧಕ ಸುಧಾಕರ್, ಯೋಜನೆಯ ಯೋಜನಾಧಿಕಾರಿಗಳು, ಮೇಲ್ವಿಚಾರಾಕರು ಉಪಸ್ಥಿತರಿದ್ದರು.