News Kannada
Friday, March 31 2023

ಕರಾವಳಿ

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ಬೀದಿನಾಟಕ

Photo Credit :

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ಬೀದಿನಾಟಕ

ಅಕ್ಕಪಕ್ಕದ ಎರಡು ಊರು. ಆ ಎರಡೂ ಊರಿನಲ್ಲಿ ವಿಪರೀತ ಎನ್ನುವಂತಹ ಕಸವಿಲೇವಾರಿ ಸಮಸ್ಯೆ. ಒಂದು ದಿನ ಎರಡೂ ಊರಿನ ಜನರೆಲ್ಲಾ ಭೇಟಿಯಾಗಿ ಇದೇ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ. ಪ್ಲಾಸ್ಟಿಕ್ ಎಂಬ ಮಾರಿಯನ್ನು ಹೊಡೆದೋಡಿಸಲು ಪಣತೊಟ್ಟಾಗ, ಅದೇ ಪ್ಲಾಸ್ಟಿಕ್ ಅವರನ್ನು ಇನ್ನಿಲ್ಲದಂತೆ ಕಾಡುತ್ತದೆ. ಇದರಿಂದ ಅವರು ಹೇಗೆ ಪಾರಾಗುತ್ತಾರೆ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನೀವೊಮ್ಮೆ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಬೀದಿ ನಾಟಕವನ್ನೊಮ್ಮೆ ನೋಡಬೇಕು. ಅದಕ್ಕಾಗಿ ಒಮ್ಮೆ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಪಾಲ್ಗೊಳ್ಳಬೇಕು. ಪ್ಲಾಸ್ಟಿಕ್ ಎಂಬ ಬೃಹದ್ ರಾಕ್ಷಸ ಹಿಡಿತದಿಂದ ಜೀವಸಮೂಹ ವಿಮುಕ್ತಗೊಳ್ಳುವ ಮಾರ್ಗ ಗೊತ್ತಾಗುತ್ತದೆ.

ಪ್ಲಾಸ್ಟಿಕ್ ಈಗ ಕೇವಲ ಒಂದು ನಿರ್ದಿಷ್ಟ ಊರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದು ಈಗ ಇಡೀ ಜಗತ್ತನ್ನು ಕಾಡುತ್ತಿದೆ. ಅದನ್ನು ಬಗ್ಗು ಬಡಿಯು ಅಸ್ತ್ರವೂ ನಮ್ಮಲ್ಲೇ ಇದೆ ಎಂಬುದನ್ನು ತಿಳಿಸುವ ಪ್ರಯತ್ನ ಈ ಬೀದಿ ನಾಟಕದ್ದು. ಇದು ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ!

ಪ್ಲಾಸ್ಟಿಕ್ ಸಮಸ್ಯೆಯಿಂದ ಗ್ರಾಮಸ್ಥರು ಬಳಲುತ್ತಿರುವಾಗ ಕಸ ವಿಲೇವಾರಿ, ಸ್ವಚ್ಛತೆಯ ಕುರಿತು ಅರಿವಿನ ಮಾರ್ಗವನ್ನು ಜಾಗೃತ ವ್ಯಕ್ತಿಯೊಬ್ಬರು ತಿಳಿಸಿಕೊಡುತ್ತಾರೆ. ಈ ಪ್ರಸಂಗವನ್ನು ಮನೋಜ್ಞವಾಗಿ ಈ ಬೀದಿನಾಟಕ ಬಿಂಬಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಎಂದರೆ ಜನಸಾಗರವೇ ಸೇರಿರುತ್ತದೆ. ಅಂದ ಮೇಲೆ ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು. ಒಂದಿಷ್ಟು ಜನರನ್ನು ನೇಮಿಸಿ ಗಮನ ನೀಡಿ ಎನ್ನುವುದರ ಬದಲಾಗಿ ಜನರಲ್ಲೇ ಜಾಗೃತಿ ಮೂಡಿಸಿದರೆ ಹೇಗೆ? ಈ ಭಿನ್ನ ಆಲೋಚನೆ ಹೊಳೆದಿದ್ದೇ ತಡ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಬೀದಿನಾಟಕವೊಂದು ರೂಪುಗೊಂಡಿತು. ಅದುವೇ ’ನಾವು ಮತ್ತು ನಮ್ಮ ಪರಿಸರ’.

ಲಕ್ಷ ದೀಪಗಳ ಸಂಗಮಕ್ಕೆ ಇನ್ನಷ್ಟು ಮೆರುಗು ತುಂಬಲು ದಿನಾಂಕ ೨೨ರಿಂದ ೨೬ರವರೆಗೆ ’ನಾವು ಮತ್ತು ನಮ್ಮ ಪರಿಸರ’ ಬೀದಿನಾಟಕವನ್ನು ಎಸ್.ಕೆ.ಡಿ.ಆರ್.ಡಿ.ಪಿ.ಯ ಕಲಾವಿದರ ತಂಡ ಪ್ರದರ್ಶಿಸಲಿದೆ. ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಇರುವ ’ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಕಾರ್ಯಕರ್ತರೇ ಪಾತ್ರಧಾರಿಗಳು. ೧೫ ಜನರ ಈ ತಂಡ ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಪರಿಸರ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಶಿಕ್ಷಕ ಚಂದ್ರಹಾಸ ನಾಟಕ ರಚಿಸಿ ನಿರ್ದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಎಲ್ಲಾ ಕ್ಷೇತ್ರಗಳಿಂದ ಒಬ್ಬೊಬ್ಬ ಸಿಬ್ಬಂದಿಯನ್ನು ಆಯ್ಕೆಮಾಡಿ, ಪುಟ್ಟ ತಂಡ ಕಟ್ಟಿಕೊಂಡು ಪರಿಸರ ರಕ್ಷಣೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮ, ಭೂಮಿಗೆ ಆಗುವ ಹಾನಿಗಳು, ಹಾಗೂ ಮಾನವರ ಜೀವಕ್ಕೆ ಆಗುವ ನಷ್ಟಗಳನ್ನು ಸರಳವಾಗಿ ಪ್ರಸ್ತುತಪಡಿಸಿದ್ದಾರೆ.

ನಾಟಕದ ಕಥಾವಸ್ತು ಮಾತ್ರವಲ್ಲ, ನಾಟಕದ ಪರಿಕರವೂ ವಿಶೇಷವಾಗಿದೆ. ಅನುಪಯುಕ್ತ ಪ್ಲಾಸ್ಟಿಕ್ ಬಾಲ್, ಚೊಂಬು, ಇವುಗಳನ್ನೇ ಉಪಯೋಗಿಸಿ, ಕಿರೀಟ, ಹಾರ ಇವುಗಳನ್ನು ತಯಾರಿಸಲಾಗಿತ್ತು. ಇವುಗಳನ್ನು ವಿನ್ಯಾಸ ಮಾಡಿದವರು ಮಹೇಶ್‌ಆಚಾರ್ಯ. ಇವರೂ ಗ್ರಾಮಾಭಿವದ್ಧಿ ಯೋಜನಾ ಸಿಬ್ಬಂದಿ.

See also  ಟಿಸಿಎಸ್ ಐಯಾನ್ -ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಶೈಕ್ಷಣಿಕ ಒಡಂಬಡಿಕೆ

ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಯಾವುದೇ ನಡೆಯಲಿ, ಅಲ್ಲಿ ಈ ತಂಡ ಹಾಜರಿದ್ದು ಜನರು ಜವಾಬ್ದಾರಿಮರೆಯದಂತೆ ನೆನಪಿಸುತ್ತದೆ. ಲಕ್ಷದೀಪೋತ್ಸವದ ಅಷ್ಟೂ ದಿನಗಳ ಕಾಲ ಸಂಜೆ ೪ರಿಂದ ರಾತ್ರಿ ೧೦ ಗಂಟೆಯವರೆಗೆ ಎಲ್ಲಾ ಕಡೆ ಸಂಚರಿಸಿ, ನಾಟಕದ ಜೊತೆಗೆ ಜಾಥಾ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು