ಬೆಳ್ತಂಗಡಿ : ಪಟ್ಟಣ ಪಂಚಾಯತಿಗೆ ಬಂದಿರುವ ಹತ್ತು ಕೋಟಿ ಅನುದಾನದ ಕಾಮಗಾರಿಗಳಲ್ಲಿ ಕೆಲ ಕಾಮಗಾರಿಗಳ ಶಿಲಾನ್ಯಾಸವನ್ನು ಈ ಹಿಂದೆ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದ್ದರು ಇದನ್ನು ಮತ್ತೆ ಈಗಿನ ಮುಖ್ಯಮಂತ್ರಿಯವರು ಭಾನುವಾರ ಉದ್ಘಾಟಿಸುವ ಕಾರ್ಯಕ್ರಮವಿದ್ದು ಇದರಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗವಹಿಸಿರುವುದು ಪಕ್ಷಕ್ಕೆ ಶೋಭೆಯಲ್ಲ. ಇದರಿಂದ ತಾಲೂಕಿನಲ್ಲಿ ನಾನು ಪಕ್ಷ ಸಂಘಟನೆ ಮಾಡುತ್ತಿರುವಾಗ ನನಗೆ ಮಾಡುತ್ತಿರುವ ಅವಮಾನ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದ್ದಾರೆ.
ಅವರು ಶುಕ್ರವಾರ ಬೆಳ್ತಂಗಡಿಯ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕೆಲವೊಂದು ಅನುದಾನಗಳು ಕಾಂಗ್ರೆಸ್ ಸರಕಾರ ಇರುವಾಗ ಮಂಜೂರಾಗಿದ್ದು ಇದನ್ನು ಜನತೆಗೆ ತಿಳಿಸುವ ಕಾರ್ಯ ನನ್ನನ್ನು ಸಹಿತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾರ್ಯಕರ್ತರದ್ದು ಇದನ್ನು ಬಿಟ್ಟು ಈಗಿನ ಶಾಸಕರು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಜಿಲ್ಲಾಧ್ಯಕ್ಷರು ಭಾಗವಹಿಸಿದರೆ ಜನತೆಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂದು ಅವರು ವಿಮರ್ಶಿಸಬೇಕು. ಹಿಂದಿನಿಂದಲೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಅಧಿಕಾರಿಕ್ಕೆ ಬಂದಿದೆ. ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆಯಿದೆ. ನಾನು ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರಕಾರದಿಂದ ಒತ್ತಡ ತಂದು ಮಾಡಿಸಿದ್ದೇನೆ. ಈ ಬಾರಿ ಜನತೆ ಬಿಜೆಪಿಯನ್ನು ಗೆಲ್ಲಿಸಿದೆ. ಆದರೆ ಅಭಿವೃದ್ಧಿ ಕಾರ್ಯವನ್ನು ಮತ್ತೆ ಜನೆತೆಗೆ ತಿಳಿಸಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು. ಆದರೆ ಕಾಂಗ್ರೆಸ್ ಜಿಲ್ಲಾದ್ಯಕ್ಷರು ಇದನ್ನು ಗಮನಿಸದೆ ವರ್ತಿಸಿದರೆ ಮುಂದಿನ ದಿನಗಳಲ್ಲಿ ನಾನೇ ಏನಾದರೊಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಪಕ್ಷ ಬದಲಿಸುವ ಉದ್ದೇಶವೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವ ಅನಿವಾರ್ಯತೆ ಬರಬಹುದು. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾದ್ಯಕ್ಷರು ಎಚ್ಚರ ವಹಿಸಬೇಕು ಎಂದರು.
ಬೆಳ್ತಂಗಡಿ ಪಟ್ಟಣ ಪಂಚಾಯತಿಗೆ ರಾಜ್ಯಸರಕಾರದ ಎಸ್.ಎಫ್.ಸಿ ವಿಶೇಷ ಅನುದಾದಡಿಯಲ್ಲಿ 07/03/2018 ರಂದು ಹತ್ತು ಕೋಟಿ ಅನುದಾನ ಮಂಜೂರಾಗರುವ ಬಗ್ಗೆ ದಾಖಲೆಗಳನ್ನು ನೀಡಿದ ಬಂಗೇರ ಅವರು ಆಗಲೇ ಮಂಜೂರಾಗಿರುವ ಕಾಮಗಾರಿಯನ್ನು ಇದೀಗ ಬಂದಿರುವ ಕಾಮಗಾರಿ ಎಂದು ತಪ್ಪುದಾರಿಗೆ ಎಳೆಯುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾಮಗಾರಿಗಳ ಬಗ್ಗೆ ಇನ್ನಷ್ಟು ದಾಖಲೆಗಳನ್ನು ನೀಡುವುದಾಗಿಯೂ ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸತೀಶ್ ಕಾಶೀಪಟ್ಣ, ನಿರಂಜನ ಬಾವಂತಬೆಟ್ಟು, ನವೀನ್ ರೈ ಬಾರ್ಯ, ಉಪಸ್ಥಿತರಿದ್ದರು.