ಬೆಳ್ತಂಗಡಿ : ಮೂರು ದಿನಗಳಿಂದ ಸರಕು ಸಾಗಾಟದ ಬೃಹತ್ ಲಾರಿಗಳೆರಡು ಮುಂದೆ ಸಾಗದೆ ನಿಂತಿರುವ ವಿದ್ಯಮಾನ ಕಕ್ಕಿಂಜೆ ಎಂಬಲ್ಲಿ ಸಂಭವಿಸಿದೆ. ಹೇರಿಕೊಂಡು ಬಂದಿರುವ ಸರಕುಗಳನ್ನು ಇಳಿಸಬೇಕಾದ ಸ್ಥಳ ಸೇರಲು ಇರುವ ಕೆಲವೊಂದು ಅಡಚಣೆಗಳಿಂದಾಗಿ ಎರಡು ಬೃಹತ್ ಗಾತ್ರದ ಟ್ರಕ್ ಗಳು ಕಳೆದ ಮೂರು ದಿನಗಳಿಂದ ಕಕ್ಕಿಂಜೆಯ ಕತ್ರಿಗುಡ್ಡ ಎಂಬಲ್ಲೀ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಿಲ್ಲುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿರುವ ಕೇಂದ್ರ ಸರಕಾರ ಸ್ವಾಮ್ಯದ ಗ್ಯಾಸ್ ಪೈಪ್ ಲೈನ್ ಘಟಕಕ್ಕೆ ಮಹಾರಾಷ್ಟ್ರದ ಸಾಂಗ್ಲಿ ಕಡೆಯಿಂದ ಸರಕುಗಳನ್ನು ಹೇರಿಕೊಂಡು ಬಂದಿರುವ 18 ಚಕ್ರದ ಎರಡು ಬೃಹತ್ ಗಾತ್ರದ ಟ್ರಕ್ ಗಳು ಭಾನುವಾರದಿಂದ ಇಲ್ಲಿ ನಿಂತಿದೆ.ಇಲ್ಲಿ ತನಕ ರಸ್ತೆ ಬದಿ ಇರುವ ವಿದ್ಯುತ್ ಲೈನ್,ಫೋನ್ ಕೇಬಲ್ ಇತ್ಯಾದಿಗಳನ್ನು ತಪ್ಪಿಸುತ್ತ ಸಾಗಿರುವ ಟ್ರಕ್ ಗಳು ಇಲ್ಲಿಂದ ಮುಂದಿನ ಗ್ರಾಮೀಣ ರಸ್ತೆಯಲ್ಲಿ ಸಾಗಲು ಹಲವು ಅಡಚಣೆಗಳು ಎದುರಾಗಿವೆ ಎಂದು ತಿಳಿದುಬಂದಿದೆ.
ಕಕ್ಕಿಂಜೆಪೇಟೆಯಿಂದ ನೆರಿಯಕ್ಕೆ ತಿರುಗುವ ರಸ್ತೆ ತೀರಾ ಅಗಲ ಕಿರಿದಾಗಿದೆ. ಇಕ್ಕೆಲಗಳಲ್ಲೂ ಅಂಗಡಿಗಳಿವೆ. ಇಲ್ಲಿ ಸದಾ ಜನ, ವಾಹನಸಂದಣಿ ಇರುತ್ತದೆ. ಇದರಿಂದ ತಿರುವು ತೆಗೆದುಕೊಳ್ಳಲು ತೆಗೆದುಕೊಳ್ಳಲು ಹೆಚ್ಚಿನ ಸಮಸ್ಯೆ ಇದೆ.ನೆರಿಯ ರಸ್ತೆಯಲ್ಲಿ ಮೆಸ್ಕಾಂನ ಎಚ್ ಟಿ,ಎಲ್.ಟಿ, ಖಾಸಗಿ ವಿದ್ಯುತ್ ಕಂಪನಿಗಳ ಲೈನ್ ಗಳಿವೆ.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವಿದ್ಯುತ್ ಲೈನ್ ಗಳು ತೀರಾ ಕೆಳಮಟ್ಟದಲ್ಲಿವೆ. ಇದರ ಅಡಿಯಲ್ಲಿ ಈ ಲಾರಿಗಳು ಸಂಚರಿಸಿದರೆ ಅಪಾಯ ತಪ್ಪಿದ್ದಲ್ಲ. ಲಾರಿಗಳು ಈ ರಸ್ತೆಯಲ್ಲಿ ಚಲಿಸಬೇಕಾದರೆ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡಬೇಕಾದ ಅಗತ್ಯವಿದೆ.ಅಲ್ಲದೆ ಕೆಲವು ಜಾಗಗಳಲ್ಲಿ ವಿದ್ಯುತ್ ತಂತಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಬೇಕಾಗ ಬಹುದು.ಆದರೆ ಈ ಎಲ್ಲಾ ಕೆಲಸಗಳನ್ನು ತಕ್ಷಣಕ್ಕೆ ಮಾಡಲು ಸಾಧ್ಯವಿಲ್ಲ.ನೆರಿಯ ರಸ್ತೆಯ ಕೆಲವು ಮೋರಿ,ಕಿರುಸೇತುವೆಗಳು ಗಟ್ಟಿಮುಟ್ಟಾಗಿ ಇಲ್ಲದ ಕಾರಣ ಈ ರಸ್ತೆಯಲ್ಲಿ ಸಂಚರಿಸಲು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಈ ಕಾರಣಗಳಿಂದ ಟ್ರಕ್ ಗಳು ರಸ್ತೆಬದಿ ನಿಲ್ಲುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಾರ್ಮಾಡಿ-ಉಜಿರೆ ರಸ್ತೆಯಲ್ಲಿ ವಿಪರೀತ ವಾಹನ ಸಂಚಾರ ಇದೆ.ಟ್ರಕ್ ಗಳು ರಸ್ತೆ ಬದಿಯಲ್ಲಿ ನಿಂತಿರುವುದರಿಂದ ಉಜಿರೆಯಿಂದ ಚಾರ್ಮಾಡಿ ಕಡೆ ಪ್ರಯಾಣಿಸುವಾಗ ಮುಂದಿನಿಂದ ಬರುವ ವಾಹನಗಳು ತಕ್ಷಣ ಗಮನಕ್ಕೆ ಬರುವುದಿಲ್ಲ. ರಸ್ತೆಯು ಅಗಲ ಕಿರಿದಾಗಿರುವ ಕಾರಣ ಎರಡು ಘನ ವಾಹನಗಳು ಏಕಕಾಲದಲ್ಲಿ ಸಂಚರಿಸಲು ಕಷ್ಟವಾಗಿದೆ. ಇದರಿಂದ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಸ್ಥಳೀಯ ಭಾಷೆ ಅರಿಯದ ಟ್ರಕ್ ನ ನಾಲ್ವರು ಸಿಬ್ಬಂದಿಗಳಿಗೂ ಸರಿಯಾದ ಆಹಾರ, ವಸತಿ ವ್ಯವಸ್ಥೆ ಇಲ್ಲದ ಕಾರಣ ಅವರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.