ಬೆಳ್ತಂಗಡಿ: ಇತ್ತೀಚೆಗೆ ಕಾರ್ಯಕ್ರಮಗಳೆಂದರೆ ಅದು ಹೆಚ್ಚಾಗಿ ಆಡಂಬರ, ಅಂತಸ್ತು, ಅದ್ದೂರಿ, ಗೌರವದ ಸಂಕೇತವಾಗಿ ಮೂಡಿಬರುತ್ತಿವೆ. ಸಮಾಜಕ್ಕೆ ಯಾವುದೇ ಸಂದೇಶವನ್ನು ನೀಡದೆ ಕೇವಲ ದುಂದುವೆಚ್ಚಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಆದರೆ ಉಜಿರೆಯಲ್ಲಿ ಜೂ.4ರಂದು ಜರಗಿದ ಬ್ರಹ್ಮೋಪದೇಶ ಕಾರ್ಯಕ್ರಮ ಇತರರ ಬಾಳಿಗೆ ಬೆಳಕಾಗುವ ಜತೆ ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಗಿ ಮೂಡಿಬಂತು.
ಇಲ್ಲಿನ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರಗಿದ ನಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ಯಾಡಿ-1 ಗ್ರಾಮದ ಪಡ್ಪು ಎಂಬಲ್ಲಿಯ ಶಾರದಾ ಹಾಗೂ ಹರ್ಷೇಂದ್ರಕುಮಾರ್ ದಂಪತಿ ಅವರ ಪುತ್ರ ಕೌಸ್ತುಭ ರವರ ಬ್ರಹ್ಮೋಪದೇಶ ಕಾರ್ಯಕ್ರಮವು ಇದಕ್ಕೆ ಸಾಕ್ಷಿಯಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಹಾಗೂ ಶ್ರೀದೇವಿ ಆಪ್ಟಿಕಲ್ಸ್ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ, ನೇತ್ರದಾನ ಸಂಕಲ್ಪಗಳು ಜರಗಿದವು.
70 ಜನರಿಂದ ನೇತ್ರದಾನ ಸಂಕಲ್ಪ
ಒಟ್ಟು 70 ಮಂದಿ ನೇತ್ರದಾನ ಸಂಕಲ್ಪವನ್ನು ಮಾಡಿದರು. 118 ಜನರಿಗೆ ಉಚಿತ ನೇತ್ರ ತಪಾಸಣೆ, 34 ಜನರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ, 5 ಜನರಿಗೆ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮೂರು ಕುಟುಂಬಗಳಿಗೆ ಕಾರ್ಯಕ್ರಮದಲ್ಲಿ ಆರ್ಥಿಕ ಸಹಕಾರವನ್ನು ನೀಡಲಾಯಿತು.
ಪ್ರಸಾದ್ ನೇತ್ರಾಲಯದ ಪಿ ಆರ್ ಒ ರಿಶಿಕ್ ಶೆಟ್ಟಿ, ರಾಘವೇಂದ್ರ ಗುಡಿಗಾರ್, ಕೃಷ್ಣಪ್ಪ ಗುಡಿಗಾರ್, ಜಯಾ ಮೋನಪ್ಪ ಗೌಡ, ರವಿ ಮಂಜುನಾಥ ಗುಡಿಗಾರ ಮತ್ತಿತರರು ಉಪಸ್ಥಿತರಿದ್ದರು.
“ದುಂದುವೆಚ್ಚದ ಕಾರ್ಯಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲ. ನಾವು ನಡೆಸುವ ಯಾವುದೇ ಕಾರ್ಯಕ್ರಮ ಇತರರ ಬಾಳಿಗೆ ಬೆಳಕಾಗಬೇಕು.ಈ ನಿಟ್ಟಿನಲ್ಲಿ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಮಾದರಿ ಕಾರ್ಯಕ್ರಮವಾಗಿ ನಡೆಸುವ ಸಂಕಲ್ಪದೊಂದಿಗೆ ಸಮಾಜಕ್ಕೆ ಕಿಂಚಿತ್ತು ಸಹಕಾರ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಯಿತು” – ಹರ್ಷೇಂದ್ರ ಕುಮಾರ್, ವಧುವಿನ ತಂದೆ, ಕನ್ಯಾಡಿ
“ಇಂದಿನ ದುಂದುವೆಚ್ಚದ ಕಾರ್ಯಕ್ರಮಗಳು ಸಮಾಜಕ್ಕೆ ಯಾವುದೇ ಉತ್ತಮ ಸಂದೇಶ ನೀಡುತ್ತಿಲ್ಲ. ಸಮಾಜಕ್ಕೆ ದಾರಿದೀಪವಾಗುವ ಇತರರಿಗೆ ನೆರವಾಗುವ ಕಾರ್ಯಕ್ರಮಗಳು ನಡೆದರೆ ಅದು ಅರ್ಥಪೂರ್ಣ” – ರಾಘವೇಂದ್ರ ಗುಡಿಗಾರ್,
ಅಧ್ಯಕ್ಷರು, ಜಿಲ್ಲಾ ಗುಡಿಗಾರರ ಸಂಘ.