ಬೆಳ್ತಂಗಡಿ: 2022 ರ ಜನವರಿ 18 ರಂದು ಉಡುಪಿಯ ಪರ್ಯಾಯ ಮಹೋತ್ಸವದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಆಗಮಿಸಿದರು.
ಪರ್ಯಾಯ ಪೀಠವೇರುವ ಮೊದಲು ಧರ್ಮಸ್ಥಳಕ್ಕೆ ಭೇಟಿಯಾಗುವ ಸಂಪ್ರದಾಯವಿದೆ. ಶ್ರೀಗಳಿಗೆ ಪರಂಪರಾಗತ ಸ್ವಾಗತವನ್ನು ಕ್ಷೇತ್ರದಲ್ಲಿ ಮಾಡಲಾಯಿತು. ಸ್ವಾಮೀಜಿಯವರು ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಸ್ವಾಮೀಜಿಯವರನ್ನು ಗೌರವಿಸಿದರು. ಸ್ವಾಮೀಜಿಯವರ ಪಾದಪೂಜೆ ನಡೆಸಲಾಯಿತು.
ಸ್ವಾಮೀಜಿಯವರು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಆರಂಭದಲ್ಲಿ ಸ್ವಾಮೀಜಿಯವರನ್ನು ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮತ್ತು ದೇವಳ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಕಾರ್ಯಕ್ರಮ ಸಂಯೋಜಿಸಿದರು.