ಪುತ್ತೂರು : ಇವತ್ತು ಇಡೀ ಕರ್ನಾಟಕದಲ್ಲಿ ಕನ್ನಡಿಗರನ್ನು, ಭಾರತೀಯರನ್ನು ಒಡೆದು ಬೇರೆ ಬೇರೆ ಮಾಡುವ ಕೆಲಸವನ್ನು ಕೋಮುವಾದಿ ಬಿಜೆಪಿ, ಆರೆಸ್ಸೆಸ್ ಮಾಡುತ್ತಿದೆ. ನಾವು ಸಂವಿಧಾನವನ್ನು ಗೌರವಿಸುವವರಾಗಿದ್ದು, ಕ್ರಿಶ್ಚಿಯನರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್, ಹಿಂದೂಗಳಿಗೆ ಭಗವದ್ಗೀತೆಯೇ ಸಂವಿಧಾನವಾಗಿದ್ದು, ನಾವೆಲ್ಲರೂ ಒಂದಾಗಿ ಕೋಮುವಾದಿಗಳಿಗೆ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ ಎಂದು ರಾಜ್ಯ ಯುವಕ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರೀಸ್ ನಲಪ್ಪಾಡ್ ಅವರು ಹೇಳಿದರು.
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ಬುಧವಾರ ಸಂಜೆ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡಿ ಸಮಾಜವನ್ನು ಕೆಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಯುವಕ ಕಾಂಗ್ರೆಸ್ ವತಿಯಿಂದ ಪ್ರತೀ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್ ರಚಸಬೇಕು. ಪ್ರತೀ ಬೂತ್ಮಟ್ಟದಲ್ಲಿ ಕ್ರಿಯಾಶೀಲರಾಗಿರುವ ಒಬ್ಬರನ್ನು ಆಯ್ಕೆ ಮಾಡಿ ಇಡೀ ಬ್ಲಾಕ್ ವ್ಯಾಪ್ತಿಯ ಪಟ್ಟಿಯನ್ನು ನೀಡಬೇಕು ಎಂದು ಅವರು ತಿಳಿಸಿದರು.
ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದ್ದು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್ ಪಕ್ಷ ಎಂದ ಅವರು ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ, ಆರೆಸ್ಸೆಸ್ ಇತ್ತಾ ಎಂದು ಪ್ರಶ್ನಿಸಿದರು. ದೇಶದ ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷದ ಸದಸ್ಯರಾದ ನಾವೆಲ್ಲರೂ ಭಾರತೀಯರಾಗಿದ್ದು, ಎಲ್ಲಾ ಧರ್ಮದೇವರನ್ನು ಜತೆಗೆ ಕರೆಕೊಂಡು ಹೋಗುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ದೇಶದ ಇತಿಹಾಸವನ್ನು ಉಳಿಸುವುದು ಈ ಪಕ್ಷದವರಾದ ನಿಮ್ಮ ಕೈಯಲ್ಲಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಯುವಕ ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ಅನಿಲ್ಕುಮಾರ್ ಯಾದವ್ ಮತ್ತು ವಿದ್ಯಾ ಬಾಲಕೃಷ್ಣ,ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಯುವಕ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು,ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು,ಯುವಕ ಕಾಂಗ್ರೆಸ್ ಮುಖಂಡರಾದ ಮೆರಿಲ್ ರೇಗೋ, ಆಶಿಫ್ ಪೆರೇರಾ, ನಾಸೀರ್ ಸಾಮಾನಿಗೆ,ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಕಾರ್ಯದಶರ್ಿ ಎಂ.ಎಸ್.ಮಹಮ್ಮದ್, ಯುವಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಉಪಾಧ್ಯಕ್ಷ ಗಿರೀಶ್ ಆಳ್ವ, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಪಾರೂಕ್ ಬಾಯಂಬೆ, ಪಕ್ಷದ ಮುಖಂಡರಾದ ಅನಿತಾ ಹೇಮನಾಥ ಶೆಟ್ಟಿ, ಫಝಲ್ ರಹೀಂ, ಮಹೇಶ್ ಅಂಕೋತಿಮಾರ್, ಸೂತ್ರಬೆಟ್ಟು ಜಗನ್ನಾಥ ರೈ, ವಾಣಿ ಶ್ರೀಧರ್,ವೀಣಾ ಭಟ್,ಸಚ್ಚಿನ್ ಮತ್ತಿತರರು ಇದ್ದರು.