ಬೆಳ್ತಂಗಡಿ: ನಮ್ಮ ಕ್ಷೇತ್ರ ಅಭಿವೃದ್ಧಿಗಳನ್ನ ಯಾವ ರೂಪದಲ್ಲಿ ಕೈಗೊಳ್ಳಬೇಕೆಂಬ ನೆಲೆಯಲ್ಲಿ ಚಿಂತಿಸಿದಾಗ ತಳಮಟ್ಟದ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯ. ಪಕ್ಷದ ಜತೆಗೂಡಿ ಜನಪರ ಸಂಕಲ್ಪದಿಂದ ಅಭಿವೃದ್ಧಿಯೆಡೆಗಿನ ವಿಶ್ವರೂಪ ಅನಾವರಣಗೊಳ್ಳುವ ಪ್ರಥಮ ತಾಲೂಕು ಎಂದರೆ ಅದು ಬೆಳ್ತಂಗಡಿಯಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘನಾತ್ಮಕ ಚಟುವಟಿಕೆಗಳ ಕುರಿತು ಮಂಡಲ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ, ಮಹಾ ಶಕ್ತಿ ಕೇಂದ್ರ ಪ್ರಮುಖರು, ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರುಗಳ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರೊಂದಿಗಿನ ಮಾ.೬ ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಹಮ್ಮಿಕೊಂಡ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಲ ಸೌಕರ್ಯ ಅಭಿವೃದ್ಧಿ, ಸರಕಾರಿ ಶಾಲೆ, ಆರೋಗ್ಯ ಕೇಂದ್ರ, ರಸ್ತೆ, ಅಂಗನವಾಡಿ ಕೇಂದ್ರ ಇರಬೇಕೆಂದು ಮಾಡೆಲ್ ಆಗಿ ಬೆಳ್ತಂಗಡಿಯನ್ನು ಶಾಸಕರು ನಡೆಸಿಕೊಡುತ್ತಿದ್ದಾರೆ. ಕಾರ್ಯಕರ್ತನೊಂದಿಗೆ ಕಾರ್ಯಕರ್ತನಾಗಿದ್ದು ಬೆಂಗಳೂರಿನಿಂದ ಅನುದಾನ ತರುವವರೆಗೆ ಅವರ ದೂರದೃಷ್ಟಿ ಚಿಂತನೆಯಿಂದ ಪರಿವರ್ತನೆಗೆ ನಾಂದಿಯಾಗಿದೆ, ಈ ಸಾಧನೆ ದೇಶಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ೮೧ ಗ್ರಾಮಗಳಲ್ಲಿ ೨೪೧ ಬೂತ್ಗಳಲ್ಲಿ ಶಾಸಕರ ಕಾರ್ಯವೈಖರಿಯನ್ನು ಜನಮಾನಸಗೊಳಿಸುವಲ್ಲಿ ಪ್ರಮುಖರೊಂದಿಗೆ ಸಂವಾದ ಇದಾಗಿದೆ. ತಾಲೂಕಿನ ಜನತೆಗೆ ವಿಚಾರ ಮನದಟ್ಟಾಗಬೇಕೆಂಬ ನೆಲೆಯಲ್ಲಿ ಕಾರ್ಯಕ್ರಮ ನಡೆಸಿದ್ದೇವೆ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಮಂಡಲ ಉಪಾಧ್ಯಕ್ಷ ಸೀತರಾಮ ಬೆಳಾಲು ವಂದಿಸಿದರು.