ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಘನ ತ್ಯಾಜ್ಯ ಘಟಕಕ್ಕೆ ನಿಗದಿಯಾದ ಜಾಗ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಒ ಅವರು ತಹಸೀಲ್ದಾರ್ ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಹೇಶ್ ಜೆ. ಹಾಗೂ ಅವರ ತಂಡ ಗುರುವಾರ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸ.ನಂ 97/1ರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾದ ಜಾಗದಲ್ಲಿ ಸ್ಥಳೀಯರೊಬ್ಬರು ಜಾಗ ಅತಿಕ್ರಮಿಸಿರುವುದು ಕಂಡು ಬರುತ್ತಿದೆ. ಅಲ್ಲದೆ ಗೋಮಾಳ ಜಾಗದಲ್ಲಿ 94ಸಿಯಲ್ಲಿ ಹಕ್ಕುಪತ್ರ ಪಡೆದಿದ್ದಾರೆ.
ಅಲ್ಲದೆ ಇನ್ನೊಬ್ಬರು ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿದ ಅನುಮಾನವಿದ್ದು, ನಂತರ 94ಸಿಯಲ್ಲಿ ಹಕ್ಕುಪತ್ರ ಪಡೆದು ಸರಕಾರದ ಶರ್ತ ಉಲ್ಲಂಘನೆ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಕಂದಾಯ ನಿರೀಕ್ಷಕ ಪ್ರದೀಶ್ ಕುಮಾರ್, ಗ್ರಾಮ ಲೆಕ್ಕಿಗ ಸತೀಶ್, ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್,ಪಿ.ಡಿ.ಒ. ಜಯಕೀರ್ತಿ ಹಾಗೂ ಸದಸ್ಯರು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.