ಬೆಳ್ತಂಗಡಿ: ಚಾರ್ಮಾಡಿ ಭಾಗದಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಕೃಷಿ ಹಾನಿಯನ್ನು ಉಂಟು ಮಾಡಿವೆ.
ಚಾರ್ಮಾಡಿಯ ಮಠದ ಮಜಲು ಅನಂತ ರಾವ್ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 7 ತೆಂಗಿನ ಮರ, ಹತ್ತಾರು ಅಡಕೆ ಹಾಗೂ ಬಾಳೆ ಗಿಡಗಳನ್ನು ನೆಲಸಮ ಮಾಡಿವೆ.
ಗುಂಪಿನಲ್ಲಿ ನಾಲ್ಕೈದು ಆನೆಗಳು ಇರುವ ಶಂಕೆ ವ್ಯಕ್ತವಾಗಿದೆ.ಇವರ ಕೃಷಿ ತೋಟಕ್ಕೆ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಕಾಡಾನೆಗಳು ಕಾಟ ನೀಡುತ್ತಿವೆ. ಚಿಬಿದ್ರೆ ಭಾಗದಲ್ಲು ಅಲ್ಲಲ್ಲಿ ಕಾಡಾನೆಗಳು ತಿರುಗಾಟ ನಡೆಸಿರುವ ಕುರಿತು ಮಾಹಿತಿ ಇದೆ.
ಮುಂಡಾಜೆಯ ದುಂಬೆಟ್ಟು ಪರಿಸರದಲ್ಲಿ ಸುಮಾರು ಎರಡು ತಿಂಗಳ ಹಿಂದೆ ನಿರಂತರ 18 ದಿನ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿದ್ದವು. ಬಳಿಕ ಈ ಭಾಗದಲ್ಲಿ ಕಾಡಾನೆಗಳು ಕಂಡುಬಂದಿರಲಿಲ್ಲ.
ಕಳೆದ ಹತ್ತು ದಿನಗಳ ಹಿಂದೆ ದಿಡುಪೆ ಪರಿಸರದಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು ಕೃಷಿ ಉಂಟುಮಾಡಿದ್ದವು. ಈಗ ಮತ್ತೆ ಈ ಭಾಗಕ್ಕೆ ಕಾಡಾನೆಗಳು ಕಂಡು ಬಂದಿರುವುದು ಸ್ಥಳೀಯ ಕೃಷಿಕರ ಆತಂಕವನ್ನು ಹೆಚ್ಚಿಸಿದೆ.
ಶಿರಾಡಿ ಘಾಟಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಾಡಾನೆ ಕಂಡುಬಂದಿತ್ತು.
ಈ ಕಾಡಾನೆ ಮತ್ತೆ ತನ್ನ ಗುಂಪಿನ ಸಹಿತ ಚಾರ್ಮಾಡಿ ಕಡೆ ಕಾಲಿಟ್ಟಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಆನೆ ದಾಳಿಯಿಂದ ಬೇಸತ್ತ ಕೃಷಿಕರು ಇತ್ತೀಚಿನ ದಿನಗಳಲ್ಲಿ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ.ಮಾಹಿತಿ ನೀಡಿದರೂ ಯಾವುದೇ ರೀತಿಯ ಪರಿಹಾರವಾಗಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕೈಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.