ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಮಯದಿಂದ ನಡೆಯುತ್ತಿದ್ದ ಕೋಮು ಸಾಮರಸ್ಯ ಕದಡಿಸುವ ರಾಜಕಾರಣ ಈಗ ಪರಾಕಾಷ್ಠೆಗೆ ತಲುಪಿದ್ದು, ಪರಿಸ್ಥಿತಿ ಕೈಮೀರುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಜತೆಗೆ, ಶಾಂತಿ, ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವ ಧರ್ಮೀಯರ ಸಭೆ ಕರೆದು, ಈ ಹಿಂದಿನಂತೆ ಜಿಲ್ಲೆಯ ಸೌಹಾರ್ದ ವಾತಾವರಣವನ್ನು ಉಳಿಸಲು ಮುಂದಾಗಬೇಕು ಎಂದು ಮಾಜಿ ಸಚಿವ ಬಿ.
ರಮಾನಾಥ ರೈ ಆಗ್ರಹಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳ ಪ್ರಯೋಗ ಶಾಲೆ ಎಂದು ಕರೆಸಿಕೊಳ್ಳುತ್ತಿರುವ ಈ ಜಿಲ್ಲೆಯ ಬಗೆಗಿನ ಭಾವನೆ ಬದಲಾಯಿಸಲು ಜನರು ಜಾಗೃತರಾಗಬೇಕಾಗಿದೆ ಎಂದರು.
13 ದಿನಗಳಲ್ಲಿ 11 ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ವಿದ್ಯುತ್ ದರ, ರಸಗೊಬ್ಬರ ದರ ಹೆಚ್ಚಳವಾಗಿದೆ. ಕೋವಿಡ್ ಹೆಸರು ಹೇಳಿ ಬಿಜೆಪಿಗರು ನುಣುಚಿಕೊಳ್ಳುತ್ತಿದ್ದಾರೆ. ಸಾಧನೆ ತಿಳಿಸಿ ಮತ ಕೇಳಲು ಸಾಧ್ಯವಾಗದೆಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿಗರು, ದ್ವೇಷ ರಾಜಕಾರಣ ಸೃಷ್ಟಿಸಿ, ಸಮಸ್ಯೆಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಸಂವಿಧಾನದ ಪ್ರಕಾರ ನಡೆಯುವುದಾಗಿ ಹೇಳಿಕೊಳ್ಳುವ ಬಿಜೆಪಿಯವರು, ಒಂದು ಧರ್ಮದವರನ್ನು ಕೇಂದ್ರೀಕರಿಸಿ, ದೂಷಿಸುವ ಅಭಿಯಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂಸೆಗೆ ಹಿಂಸೆ ಉತ್ತರವಲ್ಲ. ಲೆಬನಾನ್ ಸೇರಿದಂತೆ ಜನಾಂಗೀಯ ದ್ವೇಷ ನಡೆದ ಯಾವುದೇ ದೇಶ ದೇಶವಾಗಿ ಉಳಿದಿಲ್ಲ. ಇದು ಉಲ್ಬಣಿಸದಂತೆ ಆಡಳಿತ ನಡೆಸುವ ಸರ್ಕಾರ ಎಚ್ಚರಿಕೆ ವಹಿಸಬೇಕೇ ಹೊರತು, ಅಂತಹ ದ್ವೇಷ ಹರಡುವವರಿಗೆ ಬೆಂಬಲಿಸಬಾರದು. ಮನುಷ್ಯನನ್ನು ದ್ವೇಷ ಮಾಡುವವರು ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪ್ರಕಾಶ್ ಸಾಲ್ಯಾನ್, ಶಶಿಧರ ಹೆಗ್ಡೆ, ನೀರಜ್ ಪಾಲ್, ಸುದರ್ಶನ ಜೈನ್, ಉಮೇಶ್ ದಂಡಕೇರಿ, ಮುಸ್ತಫಾ, ಅಬ್ದುಲ್ ಗಫೂರ್, ಲ್ಯಾನ್ಸಿ ಲಾಟ್ ಪಿಂಟೊ, ಹರಿನಾಥ್, ಅಶ್ರಫ್ ಇದ್ದರು.