ಬೆಳ್ತಂಗಡಿ: ಬೈಕ್ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮದ್ದಡ್ಡದ ಕಿನ್ನಿಗೊಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ನಾವೂರಿನ ನಿವಾಸಿ ಹಮೀದ್ ಕುದುರು ಅವರ ಪುತ್ರ ಮಿಸ್ಬಾಹುದ್ದೀನ್(19) ಹಾಗೂ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಅಶ್ರಫ್ ಅವರ ಪುತ್ರ ಅಶ್ಫಾನ್(19) ಮೃತ ಯುವಕರು. ಯುವಕರಿಬ್ಬರೂ ಮದ್ದಡ್ಕ ಮಸೀದಿ ಎದುರಿನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು.
ಎಂದಿನಂತೆ ಕೆಲಸ ಮುಗಿಸಿ ಮನೆಕಡೆಗೆ ಹೊರಟಿದ್ದರು. ಇತ್ತ ಗುರುವಾಯನಕೆರೆಯಿಂದ ಮದ್ದಡ್ಕ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯು ಮಿಸ್ಬಾಹುದ್ದೀನ್ ಹಾಗೂ ಅಶ್ಫಾನ್ ಇದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.