ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುಂಡಾಜೆ ಸನಿಹ ಗುರುವಾರ ತಡರಾತ್ರಿ ನಡೆದಿದೆ. ಮುಂಡಾಜೆಯಿಂದ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿ ಬಳಿ ರಾತ್ರಿ 11 ಗಂಟೆ ಸುಮಾರಿಗೆ ನಡೆದ ರಸ್ತೆ ಅವಘಡದಲ್ಲಿ ಕೊಯ್ಯುರು ನಿವಾಸಿ ರಘು ಎಂಬವರು ದಾರುಣವಾಗಿ ಮೃತಪಟ್ಟಿದ್ದಾರೆ.
ವಿದ್ಯುತ್ ಕಂಬಕ್ಕೆ ಹುಲ್ಲು ಸಾಗಾಟದ ಪಿಕಪ್ ವಾಹನ ಢಿಕ್ಕಿಯಾದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಇದರ ಅರಿವಿಲ್ಲದೆ ಸ್ಕೂಟರ್ ನಲ್ಲಿ ದಿಡುಪೆ ಕಡೆಯಿಂದ ಬರುತ್ತಿದ್ದ ಉಜಿರೆ ಕಾಲೇಜು ರಸ್ತೆಯ ಹೋಟೆಲ್ ಮಂಜುನಾಥ್ ನ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟು ಅವರು ಅಲ್ಲೇ ಕೊನೆಯುಸಿರೆಳೆದಿದ್ದಾರೆ .ಅಪಘಾತದ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತೇ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.