ಮಂಗಳೂರು, ಫೆ.19 : ಉಡುಪಿ, ದ.ಕ. ಜಿಲ್ಲೆಯಲ್ಲಿ ಆರಂಭವಾದ ಕಡತ ವಿಲೇವಾರಿ ಮಾದರಿ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಶಿಶು ಪಾಲನಾ ಕೇಂದ್ರ/ ಮಹಿಳಾ ವಿಶ್ರಾಂತಿ ಕೊಠಡಿಯ ಉದ್ಘಾಟನೆ ಹಾಗೂ ನೇತ್ರಾವತಿ ಸಭಾಂಗಣದಲ್ಲಿ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಡತ ವಿಲೇವಾರಿ ಅಭಿಯಾನದ ಮೂಲಕ ಜಡ ಹಿಡಿದ ಸರಕಾರಿ ಕೆಲಸಕ್ಕೆ ಚುರುಕು ಮುಟ್ಟಿಸಲಾಗುವುದು. ಸರಕಾರಿ ಕೆಲಸ ಮಧ್ಯವರ್ತಿಗಳ ಮೂಲಕ ನಡೆಯುವಂತಾ ಗಬಾರದು. ಬಡವರಿಗೆ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಕಡತ ವಿಲೇವಾರಿಯ ಮುಖ್ಯ ಗುರಿ. ಸರಕಾರಿ ಸೌಲಭ್ಯ ಪಡೆಯಲು ಫಲಾನುಭವಿಗಳು ಅಲೆದಾಡುವಂತಾಗಬಾರದು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕುಮ್ಕಿ, ಬಾಣಿ ಭೂಮಿಯನ್ನು ರೈತರಿಗೆ ನೀಡುವ ಬಗ್ಗೆ ಸರಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ. ಒತ್ತುವರಿಯಾದ ಭೂಮಿಯನ್ನು ರೈತರಿಗೆ 30 ವರ್ಷಗಳ ಲೀಸ್ ಗೆ ನೀಡುವ ಗುರಿ ಇದೆ. ಭೂ ಪರಿವರ್ತನೆ ತ್ವರಿತಗೊಳಿಸಲು ಸರಕಾರ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಜನರ ಬಳಿ ತೆರಳಿ ಜನರ ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕಾಟಾಚಾರಕ್ಕೆ ಈ ಕಾರ್ಯಕ್ರಮ ಆಗಬಾರದು ಎಂದು ಅಶೋಕ್ ತಿಳಿಸಿದ್ದಾರೆ.
82 ಸಾವಿರ ಕಡತ ವಿಲೇವಾರಿ ಗುರಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ಕಡತ ವಿಲೇವಾರಿ ಅಭಿಯಾನದ ಮೂಲಕ 82 ಸಾವಿರ ಕಡತ ವಿಲೇವಾರಿ ಮಾಡುವ ಗುರಿ ಇದೆ ಎಂದು ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರತಾಪ್ ಸಿಂಹ ನಾಯಕ್, ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಉಪಸ್ಥಿತರಿದ್ದರು.