ಮಂಗಳೂರು ನ. 9 : ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ, ಖಾತರಿ ಕೋಶದ ವತಿಯಿಂದ ೨೦೨೧-೨೨ ಶೈಕ್ಷಣಿಕ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗಾಗಿ ಹೊಸ ಶಿಕ್ಷಣ ನೀತಿಯ ಕುರಿತು ಓರಿಯೆಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾಗಿರುವ ವಂ. ಗುರು ಬೋನವೆಂಚೆರ್ ನಝರೆತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ‘ಪ್ರತಿಯೊಬ್ಬ ವಿದ್ಯಾರ್ಥಿಯು
ಶ್ರಮ ವಹಿಸಿ ತನ್ನನ್ನು ತಾನು ರೂಪಿಸಿಕೊಳ್ಳುವಂತಹ ಅವಕಾಶವನ್ನು ಕಾಲೇಜು ಒದಗಿಸಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ತಾವೇ ಮುತುವರ್ಜಿವಹಿಸಬೇಕು’ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರು, ಇದರ ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತ ಮನೋಜ್ ಲೂಯಿಸ್ ಮಾತನಾಡಿ ಹೊಸ ಶಿಕ್ಷಣ ನೀತಿಯು ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಜಾಗತಿಕ ವಿದ್ಯಾಮಾನಗಳಿಗೆ ಅನುಗುಣವಾದ ಶಿಕ್ಷಣ ಮಾದರಿಯನ್ನು ರೂಪಿಸುವುದು ಹಾಗೂ ವಿದ್ಯಾರ್ಥಿಗಳನ್ನು ಸಮಕಾಲೀನ ಸವಾಲುಗಳನ್ನು ಎದುರಿಸಲು ಬೇಕಾದ ಸದೃಢ ವ್ಯಕ್ತಿಗಳಾಗಿ ರೂಪಿಸುವ ಆಶಯ ಹಾಗೂ ಕಲಿಕೆ ಮತ್ತು ಫಲಿತಗಳ ನಡುವೆ ಸಮತೋಲನವನ್ನು ಸಾಧಿಸುವುದಕ್ಕೆ ಶಿಕ್ಷಣದಲ್ಲಿ ಹೆಚ್ಚು ಮಹತ್ವದ್ದು ಎಂದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಗುರು. ಮೈಕಲ್ ಸಾಂತುಮಾಯೋರ್ ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಪ್ರತಿನಿಧಿ ಜಾಕಿ ಅಬ್ಭಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಶ್ರೀಯುತ ಕ್ಯಾಸಿನ್ ರೊಡ್ರಿಗೆಸ್ ಸ್ವಾಗತಿಸಿದರು, ವಿದ್ಯಾರ್ಥಿ ಜೋಸ್ಟನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಭಾಷಾ ವಿಭಾಗದ ಮುಖ್ಯಸ್ಥ ರಾದ ಕು. ನಯನ ಕೆ ವಂದಿಸಿದರು.