News Karnataka Kannada
Saturday, April 20 2024
Cricket
ಸಮುದಾಯ

ಮಹಾನಗರಪಾಲಿಕೆಯಿಂದ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯ “ಅಲೆಪ್ಪಿ ಮಾದರಿ” ಯನ್ನು ಅಳವಡಿಸಿಕೊಳ್ಳಲು ಮಂಗಳೂರು ಸಿವಿಕ್ ಗ್ರೂಪ್ ಮನವಿ

New Project (16)
Photo Credit :

ಮಂಗಳೂರು : ಮಂಗಳೂರು ಸಿವಿಕ್ ಗ್ರೂಪ್ (ಎಂಸಿಜಿ) ಮಂಗಳೂರು ಮಹಾನಗರಪಾಲಿಕೆಯಿಂದ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯ ಅತ್ಯಂತ ಮೆಚ್ಚುಗೆ ಪಡೆದ ‘ಅಲೆಪ್ಪಿ ಮಾದರಿ’ ಯನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದೆ. ಈ ವ್ಯವಸ್ಥೆಯು ಮಹಾನಗರಪಾಲಿಕೆಯ ಪ್ರಸ್ತುತ ವಿರುವ ಬೃಹತ್ ಸಂಗ್ರಹಣೆ ಮತ್ತು ತ್ಯಾಜ್ಯದ ಸಂಸ್ಕರಣೆ ವ್ಯವಸ್ಥೆಯ ಬದಲಾಗಿ ಕಸವಿಲೇವಾರಿಗೆ ಪರಿಸರ ಸ್ನೇಹಿ ಮತ್ತು ಕಡಿಮೆ ಖರ್ಚಿನ ಹೆಚ್ಚು ಪರಿಣಾಮಕಾರಿ ಮಾರ್ಗವನ್ನು ಒದಗಿಸುತ್ತದೆ.

ನೈಜೆಲ್ ಅಲ್ಬುಕರ್ಕ್, ಪ್ರತಾಪಚಂದ್ರ ಕೆದಿಲಾಯ, ಸುರೇಶ್ ನಾಯಕ್, ಭಾಸ್ಕರ್ ಕಿರಣ್ ಮತ್ತು ಓಸ್ವಾಲ್ಡ್ ಪಿರೇರಾ ಅವರನ್ನೊಳಗೊಂಡ ಮಂಗಳೂರು ಸಿವಿಕ್ ಗ್ರೂಪ್ ನಿಯೋಗವು ಬುಧವಾರ 10 ನವೆಂಬರ್ 2021 ರಂದು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಿ ಶ್ರೀಧರ್ ಅವರನ್ನು ಭೇಟಿ ಮಾಡಿ ಈ ವ್ಯವಸ್ಥೆಯ ವಿವರಗಳನ್ನು ನೀಡುವ ಮನವಿ ಪತ್ರವನ್ನು ಪ್ರಸ್ತುತಪಡಿಸಿತು.

ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆಯು ಆರು ಲಕ್ಷಕ್ಕೂ ಹೆಚ್ಚು ಜನರು ಉತ್ಪಾದಿಸುವ ಎಲ್ಲಾ ಕಸವನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ಪಚ್ಚನಾಡಿಯಲ್ಲಿರುವ ಕೇಂದ್ರೀಕೃತ ಸಂಗ್ರಹಣಾ ಘಟಕದಲ್ಲಿ ಸುರಿಯುತ್ತ್ತಿದೆ. ಕಸದ ರಾಶಿ ಸ್ಥಳೀಯರಿಗೆ ದುರ್ನಾತ ಬೀರುವ ಜತೆಗೆ ಸ್ಥಳೀಯ ಅಂತರ್ಜಲವೂ ಕಲುಷಿತಗೊಂಡು ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ.

ಇದಲ್ಲದೆ, ಕಸದ ಹೂಳು (ಲ್ಯಾಂಡ್‌ಫಿಲ್) ಭೂಮಿಯನ್ನು ನಿರುಪಯುಕ್ತಗೊಳಿಸುತ್ತದೆ. ಮಹಾನಗರಪಾಲಿಕೆಯ ಈಗಿರುವ ಪಚ್ಚನಾಡಿ ತ್ಯಾಜ್ಯ ನಿರ್ವಹಣಾ ಘಟಕ ‘ಪರಿಸರ ದುರಂತ’ ಎಂದು ಪರಿಗಣಿಸಬಹುದಾಗಿದೆ ಮತ್ತು ಅದರ ಬದಲಾಗಿ ಮಂಗಳೂರು ಸಿವಿಕ್ ಗ್ರೂಪ್ ದೀರ್ಘಾವಧಿಯ ಪರಿಣಾಮ ಮತ್ತು ಪ್ರಯೋಜನಗಳೊಂದಿಗೆ ಉತ್ತಮ ಪರ್ಯಾಯವಾಗಿ ಅಲೆಪ್ಪಿ ಮಾದರಿಯನ್ನು ಪ್ರಸ್ತಾಪಿಸಿದೆ.

ಮಹಾನಗರಪಾಲಿಕೆಯು ವಾರ್ಡ್ ಸಮಿತಿಗಳು ಮತ್ತು ಏರಿಯಾ ಸಭೆಗಳನ್ನು ರಚಿಸಿರುವುದರಿಂದ, ಮಂಗಳೂರು ನಗರದಲ್ಲಿ ಅಲೆಪ್ಪಿ ಮಾದರಿಯನ್ನು ಅಳವಡಿಸಿಕೊಳ್ಳುವುದರಿಂದ ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ಸ್ (ತಿದ್ದುಪಡಿ) ಕಾಯಿದೆ 2011 ರ ಸೆಕ್ಷನ್ 13ಐ (ಐ) ಅಡಿಯಲ್ಲಿ ಪುರಸಭೆಯ ತ್ಯಾಜ್ಯ ನಿರ್ವಹಣೆಯ ಕಾರ್ಯವನ್ನು ವಾರ್ಡ್ ಸಮಿತಿಗಳಿಗೆ ನಿಯೋಜಿಸಲಾಗಿದೆ ಎಂದು ಮನವಿ ಪತ್ರ ಸೂಚಿಸಿದೆ. ವಾರ್ಡ್ ಸಮಿತಿಗಳು ಮತ್ತು ಏರಿಯಾ ಸಭೆಗಳನ್ನು ಒಳಗೊಂಡ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯನ್ನು ಅನುಷ್ಠಾನಗೊಳಿಸಲು ದಿನಾಂಕ 22.11.2012 ಮತ್ತು 10.11.2017 ರಂದು ಎರಡು ವಿಭಿನ್ನ ಸಂದರ್ಭಗಳಲ್ಲಿ ಬಿಬಿಎಂಪಿ ಗೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಗಳಲ್ಲೂ ಸೂಚಿಸಲಾಗಿದೆ.

ಅಲೆಪ್ಪಿ ಮಾದರಿ
ಅಲೆಪ್ಪಿ ಮಾದರಿಯು ತ್ಯಾಜ್ಯ ನಿರ್ವಹಣೆಯ ಒಂದು ಅನನ್ಯ ಮತ್ತು ಕಡಿಮೆ ಖರ್ಚಿನ ಹೆಚ್ಚು ಪರಿಣಾಮಕಾರಿ ವಿಧಾನವಾಗಿದ್ದು, ಕೇರಳದ ಅಲೆಪ್ಪಿ ಪಟ್ಟಣದಲ್ಲಿ ಅಳವಡಿಸಲಾಗಿದೆೆ. ದೇಶಾದ್ಯಂತ ಅಧಿಕಾರಿಗಳು ಈ ಪಟ್ಟಣದ ಸ್ವಚ್ಛತೆ ಬಗ್ಗೆ ಅಧ್ಯಯನವನ್ನು ಕೈಗೊಂಡಿದ್ದರಿAದ ಈ ಮಾದರಿಯು ಜನಪ್ರಿಯಗೊಂಡಿದೆ. ಡಿಸೆಂಬರ್ 2017 ರಲ್ಲಿ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಏನ್‌ಇಪಿ) ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ ಹೊಂದಿರುವ ವಿಶ್ವದ ಐದು ನಗರಗಳಲ್ಲಿ ಅಲೆಪ್ಪಿ ಪುರಸಭೆಯನ್ನು ಗುರುತಿಸಿದೆ. ಈ ಮಾದರಿಯಲ್ಲಿ ಒಂದು ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅದೇ ಪ್ರದೇಶದಲ್ಲಿ ಸಂಸ್ಕರಿಸಲಾಗುತ್ತದೆ, ಬೃಹತ್ ಕಸ ಸಂಗ್ರಹಣೆಯಲ್ಲಿರುವತಹ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಯೋಜನೆಯು ಪ್ರತಿ ಮನೆಯು ಪರಿಸರ ಸ್ನೇಹಿಯಾಗುವಂತೆ ಮನೆಯ ಜೈವಿಕವಾಗಿ ಕೊಳೆಯಬಲ್ಲ ತ್ಯಾಜ್ಯವನ್ನು ತಮ್ಮ ಸ್ವಂತ ಹಿತ್ತಲಿನಲ್ಲಿ ಅಥವಾ ವಾರ್ಡ್ನೊಳಗೆ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಕಾಂಪೋಸ್ಟಿಗ್ ಘಟಕಗಳಲ್ಲಿ ಸಂಸ್ಕರಿಸಲು ಅನುವು ಮಾಡಿಕೊಡುತ್ತದೆ. ಅಲೆಪ್ಪಿ ಪುರಸಭೆ 5,000 ಕಿಚನ್ ಬಿನ್‌ಗಳು, 3,000 ಬಯೋಗ್ಯಾಸ್ ಪ್ಲಾಂಟ್‌ಗಳು, 2,800 ಪೈಪ್ ಕಾಂಪೋಸ್ಟಿಗ್ ಘಟಕಗಳು ಮತ್ತು 218 ಏರೋಬಿಕ್ ಕಾಂಪೋಸ್ಟಿಗ್ ಘಟಕಗಳನ್ನು ಸ್ಥಾಪಿಸಿದೆ. ಪಟ್ಟಣವು 1.74 ಲಕ್ಷ ಜನಸಂಖ್ಯೆಯಿದ ಉತ್ಪತ್ತಿಯಾಗುವ 80 ಶೇಕಡ ತ್ಯಾಜ್ಯವನ್ನು ಯಶಸ್ವಿಯಾಗಿ ವಿಲೇಮಾಡುತ್ತಿದೆ. ಹಸಿ ಕಸದಿಂದ ಗೊಬ್ಬರ ಮಾಡುವ ಉಪಕರಣಗಳಿಗೆ ಅಲೆಪ್ಪಿ ಪುರಸಭೆ 90% ರಷ್ಟು ಸಬ್ಸಿಡಿ ನೀಡುತ್ತ್ತಿದೆ. ಪ್ರಸ್ತುತ ವಾಣಿಜ್ಯ ಸ್ಥಳಗಳ ತ್ಯಾಜ್ಯವನ್ನು ಖಾಸಗಿ ಗುತ್ತಿಗೆದಾರರು ಸಂಗ್ರಹಿಸಿ ಪಟ್ಟಣದಾದ್ಯಂತ ಇರಿಸಲಾಗಿರುವ ತೊಟ್ಟಿಗಳಲ್ಲಿ ಸಂಸ್ಕರಿಸುತ್ತಿದ್ದಾರೆ. ಅದೇ ರೀತಿ, ಜೈವಿಕವಾಗಿ ಕೊಳೆಯದಿರದಂತಹ ತ್ಯಾಜ್ಯವನ್ನು ಸಂಸ್ಕರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಸೌಲಭ್ಯವನ್ನು ಒದಗಿಸಲಾಗಿದೆ. ಪುರಸಭೆಯು ನಿಯತಕಾಲಿಕವಾಗಿ ಪಟ್ಟಣದಿಂದ ಪ್ಲಾಸ್ಟಿಕ್ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಸಂಗ್ರಹಿಸುತ್ತ್ತಿದೆ.

ಮಂಗಳೂರು ನಗರಕ್ಕೆ ಪರಿಹಾರ
ಅಲೆಪ್ಪಿ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ, ಮಂಗಳೂರು ಮಹಾನಗರಪಾಲಿಕೆಯು ಪರಿಸರ ಮಾಲಿನ್ಯವನ್ನು ತಡೆಯುವುದÀಲ್ಲದೆ ಪರಿಣಾಮಕಾರಿಯಲ್ಲದ ಮತ್ತು ದುಬಾರಿ ಬೃಹತ್ ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆ ವ್ಯವಸ್ಥೆಯ ಸ್ವರೂಪವನ್ನು ಬದಲಾಯಿಸಬಹುದು.

ಈ ಮಾದರಿಯನ್ನು ಅಳವಡಿಸಿಕೊಳ್ಳಲು ಮತ್ತು ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ತರಲು ಮಹಾನಗರಪಾಲಿಕೆಯು ಈ ಕೆಲವು ಸೌಲಭ್ಯಗಳನ್ನು ಒದಗಿಸುವಂತೆ ಮಂಗಳೂರು ಸಿವಿಕ್ ಗ್ರೂಪ್ ಒತ್ತಾಯಿಸಿದೆ: (1) ತ್ಯಾಜ್ಯ ಉತ್ಪಾದನೆಯ ಎಲ್ಲಾ ಮೂಲಗಳಿಗೆ (ಮನೆಗಳು, ರೆಸ್ಟೋರೆಂಟ್‌ಗಳು ಮತ್ತು ಕಚೇರಿಗಳು) ಸಬ್ಸಿಡಿ ದರದೊಂದಿಗೆ ಕಾಂಪೋಸ್ಟಿಗ್ ಘಟಕಗಳು ಮತ್ತು ಜೈವಿಕ ಅನಿಲ ಸ್ಥಾವರಗಳನ್ನು ಒದಗಿಸುವುದು; (2) ಹಣಕಾಸಿನ ಅಥವಾ ಸ್ಥಳಾವಕಾಶದ ಕೊರತೆಯಿಂದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗದ ಮನೆಗಳಿಗಾಗಿ ಪ್ರತಿ ವಾರ್ಡ್ ನ ಸಾರ್ವಜನಿಕ ಸ್ಥಳಗಳಲ್ಲಿ ಕಾಂಪೋಸ್ಟಿಗ್ ಘಟಕಗಳು ಮತ್ತು ಜೈವಿಕ ಅನಿಲ ಸ್ಥಾವರಗಳನ್ನು ಒದಗಿಸುವುದು; ಯಾವುದೇ ವಾರ್ಡ್ನಲ್ಲಿ ಸಾರ್ವಜನಿಕ ಸ್ಥಳ ಲಭ್ಯವಿಲ್ಲದಿದ್ದರೆ ಅಕ್ಕಪಕ್ಕದ ವಾರ್ಡ್ಗಳನ್ನು ಜೋಡಿಸಬಹುದು; (3) ತ್ಯಾಜ್ಯ ಉತ್ಪಾದನೆಯ ಮೂಲಗಳಿಂದ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತ್ಯಾಜ್ಯವನ್ನು ಸಾಗಿಸಲು ಸಾರಿಗೆ ವ್ಯವಸ್ಥೆ, ಮತ್ತು (4) ತ್ಯಾಜ್ಯ ನಿರ್ವಹಣೆಯ ಬಗ್ಗೆ ಜನರನ್ನು ಜಾಗೃತಗೊಳಿಸಲು ನಿರಂತರ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಮಹಾನಗರಪಾಲಿಕೆಯ ತ್ಯಾಜ್ಯ ನಿರ್ವಹಣಾ ನೀತಿಯನ್ನು ರೂಪಿಸುವಲ್ಲಿ ಈ ಮನವಿ ಪತ್ರವನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಎಂದು ಮಹಾನಗರಪಾಲಿಕೆಯ ಆಯುಕ್ತ ಅಕ್ಷಿ ಶ್ರೀಧರ್ ಮಂಗಳೂರು ಸಿವಿಕ್ ಗ್ರೂಪ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಮನವಿ ಪತ್ರದ ಪ್ರತಿಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಗಳಿಗೂ ರವಾನಿಸಲಾಗಿದೆ.

ಸ್ಥಳೀಯ ಸ್ವ-ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಮಂಗಳೂರಿನ ಇತರ ನಾಗರಿಕ ಸಮಸ್ಯೆಗಳನ್ನು ನಿಭಾಯಿಸಲು ಮಂಗಳೂರು ಸಿವಿಕ್ ಗ್ರೂಪ್ ಅನ್ನು 2015 ರಲ್ಲಿ ‘ಎಂಸಿಸಿ ಸಿವಿಕ್ ಗ್ರೂಪ್’ ಎಂಬ ಹೆಸರಿನಲ್ಲಿ ರಚಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು