ಸುಬ್ರಹ್ಮಣ್ಯ : ರಾಜ್ಯದಲ್ಲಿ ಹೆಚ್ಚಿನ ಪ್ರಯಾಣಿಕರು ಸಂದರ್ಶಿಸುವ ರೈಲು ನಿಲ್ದಾಣಗಳ ಸಾಲಿನಲ್ಲಿ ಬರುವ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲು ನಿಲ್ದಾ ಕರ್ನಾಟಕಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯದೇ ಇರುವುದರಿಂದ ರೈಲ್ವೇ ಪ್ರಯಾಣಿಕರು ದಿನಂಪ್ರತಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ದೇಶದ ಹಾಗೂ ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯವನ್ನು ಸಂದರ್ಶಿಸಲು ರೈಲುಮಾರ್ಗದ ಮುಖಾಂತರ ಆಗಮಿಸುವ ಪ್ರವಾಸಿಗರು ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ.ಆದರೆ ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಾರ್ವಜನಿಕ ಆಗ್ರಹ ವ್ಯಕ್ತವಾಗಿದೆ.
ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್ಫಾರಂ ನಿರ್ಮಿಸಲಾಗಿದ್ದರೂ ಪಾದಾಚಾರಿ ಮೇಲ್ಸೇತುವೆ ಇನ್ನೂ ನಿರ್ಮಾಣಗೊಂಡಿಲ್ಲ. ಎರಡು ವರ್ಷಗಳ ಹಿಂದೆ ಈ ಬಗ್ಗೆ ಟೆಂಡರ್ ನಡೆದರೂ ಕಾಮಗಾರಿ ನಡೆಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪಾದಾಚಾರಿ ಮೇಲ್ಸೇತುವೆ ಇಲ್ಲದೇ ಇರುವುದರಿಂದ ಇನ್ನೊಂದು ಬದಿಯ ಪ್ಲಾಟ್ಫಾರಂನಲ್ಲಿ ಬಂದಿಳಿಯುವ ಮಕ್ಕಳು ವೃದ್ದರೂ ಸಹಿತ ಪ್ರಯಾಣಿಕರು ರೈಲ್ವೇ ಹಳಿಗೆ ಇಳಿದು ಹಳಿಯಲ್ಲೇ ನಡೆದುಕೊಂಡು ಬಂದು. ಈ ಭಾಗದ ಪ್ಲಾಟ್ಫಾರಂನ್ನು ತ್ರಾಸದಾಯಕವಾಗಿ ಹತ್ತಬೇಕಾಗಿದೆ. ಅಲ್ಲದೇ ಜೀವದ ಹಂಗು ತೊರೆದು ಪ್ರಯಾಣಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿರುತ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಈತನಕ ಎರಡನೇ ಪ್ಲಾಟ್ಫಾರಂನಲ್ಲಿ ಪ್ರಯಾಣಿಕರಿಗೆ ನಿಲ್ಲಲೂ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಯಾವ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂಬ ಬಗ್ಗೆಯೂ ಯಾರಲ್ಲಿಯೂ ಮಾಹಿತಿ ಇಲ್ಲ.
ರಾತ್ರಿ ಸಮಯದಲ್ಲಿ ಇಲ್ಲಿ ರೈಲು ಬಂದಾಗ ಟಿಕೇಟ್ ನೀಡುವ ವ್ಯವಸ್ಥೆ ಇಲ್ಲ. ಕೌಂಟರ್ ಇದ್ದರೂ ಟಿಕೇಟ್ ನೀಡಲು ಆದೇಶ ಇಲ್ಲ ಎನ್ನಲಾಗಿದೆ. ಯಾತ್ರಾರ್ಥಿಗಳು ಮಾಹಿತಿ ಕೊರತೆಯಿಂದ ರಾತ್ರಿ ವೇಳೆ ನಿಲ್ಧಾಣಕ್ಕೆ ಬಂದಲ್ಲಿ ಟಿಕೇಟ್ ಆಲಭ್ಯತೆಯಿಂದ ನಿಲ್ದಾಣದಲ್ಲೇ ಯಾವುದೇ ಸಂರಕ್ಷಣಾ ವ್ಯವಸ್ಥೆ ಇಲ್ಲದೇ ರಾತ್ರಿ ಕಳೆಯಬೇಕಾಗಿದೆ. ಅಧಿಕಾರಿಗಳು ಹೇಳುವಂತೆ ಕೆಲವು ರೈಲುಗಳಿಗೆ ಟಿಕೇಟ್ ನೀಡಲಾಗುತ್ತಿದೆ. ಆದರೆ ಆ ಆದೇಶಗಳೇ ಬೇರೆ, ಆಗಬೇಕಿರುವುದೇ ಬೇರೆ ಎಂಬ ಮಾತು ಕೇಳಿ ಬಂದಿದೆ. ಬಿಜಾಪುರ್ ಎಕ್ಸ್ಪ್ರೆಸ್, ಕಾರಾವಾರ-ಬೆಂಗಳೂರು, ಮಂಗಳೂರು-ಬೆಂಗಳೂರು, ಕಣ್ಣೂರು-ಬೆಂಗಳೂರು ಹೀಗೆ ನಾಲ್ಕೈದು ಕಡೆಗಳ ರೈಲುಗಳು ಇಲ್ಲಿ ರಾತ್ರಿ ಹಾಗೂ ಹಗಲಲ್ಲಿ ನಿಲ್ಲಬೇಕಾಗಿದ್ದು, ಇವುಗಳಿಗೆ ಇಲ್ಲೇ ಟಿಕೇಟ್ ನೀಡುವ ವ್ಯವಸ್ಥೇ ಆಗಬೇಕೆಂಬುದು ಬೇಡಿಕೆ. ತುರ್ತು ವೈದ್ಯಕೀಯ ಕೇಂದ್ರ,ಮೆಡಿಕಲ್ ವ್ಯವಸ್ಥೆಗಳು ಇಲ್ಲಿ ಇಲ್ಲ. ದೂರದ ಕಡಬ ಅಥವಾ ಸುಬ್ರಹ್ಮಣ್ಯಕ್ಕೆ ತೆರಳಬೇಕಾದ ಪರಿಸ್ಥಿತಿ ಇಲ್ಲಿದೆ. ವೈದ್ಯಕೀಯ ಕೇಂದ್ರ ಇದ್ದರೂ ಸಿಬ್ಬಂದಿಗಳು ಪುತ್ತೂರಿನಿಂದ ಮೂರು ದಿನಕೊಮ್ಮೆ ಇಲ್ಲಿಗೆ ಬರುವುದು ಎಂದು ತಿಳಿದುಬಂದಿದ್ದು, ಖಾಯಂ ಆಗಿ ಇಲ್ಲಿಯೇ ವೈದ್ಯರು ಹಾಗೂ ಔಷಧಿ ವಿತರಣೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.
ಈಗಾಗಲೇ ಇಲ್ಲಿ ಹೊಸದಾಗಿ ನಿರ್ಮಿಸಿರುವ ಶೌಚಾಲಯ ಕಾಮಗಾರಿ ಆರಂಭಿಸಿ ಒಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಬಸ್ ತಂಗುದಾಣ, ಅಟೋ ರಿಕ್ಷಾ, ಟೂರಿಸ್ಟ್ ವಾಹನ ತಂಗುದಾಣ ವ್ಯವಸ್ಥೆಗಳೂ ಇಲ್ಲಿ ಇಲ್ಲದಾಗಿದ್ದು, ಈ ಬಗ್ಗೆಯೂ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕಡಬ,ಸುಳ್ಯ ತಾಲೂಕಿನಿಂದ ಆಗಮಿಸುವ ಸ್ಥಳೀಯ ಪ್ರಯಾಣಿಕರಿಗೆ ಕಡಬ ತಾಲೂಕಿನ ಮೂರೇ ಕಿಮೀ ದೂರದಲ್ಲಿರುವ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ವ್ಯವಸ್ಥೆ ಆದಲ್ಲಿ, ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗುತ್ತದೆ. ಆದರೆ ಹಲವಾರು ಪ್ರತಿಭಟನೆಗಳು ನಡೆದರೂ ಈ ವ್ಯವಸ್ಥೆ ಇನ್ನೂ ಆಗಿಲ್ಲ. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವನ್ನು ಆದರ್ಶ ರೈಲು ನಿಲ್ದಾಣ ಪುತ್ತೂರಿನಂತೆಯೇ ಅಭಿವೃದ್ಧಿಗೊಳಿಸಿ, ಕೋಡಿಂಬಾಳದಲ್ಲಿ ಕನಿಷ್ಠ ಪಕ್ಷ ರೈಲು ನಿಲುಗಡೆಯಾದರೂ ಮಾಡಬೇಕೆಂಬ ಕೂಗು ಹೆಚ್ಚಾಗಿದೆ. ಈ ತರಹ ಆದಲ್ಲಿ ಇಲ್ಲಿನ ಬೇಡಿಕೆಗಳು ವ್ಯವಸ್ಥಿತವಾಗಿ ಈಡೇರಬಹುದು.
ಪ್ರಸ್ತುತ ನೆಟ್ಟಣದ ರೈಲ್ವೇ ನಿಲ್ಧಾಣಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣವೆಂಬ ಹೆಸರಿದ್ದು, ಇದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಮೀಪದಲ್ಲಿ ಇರುವುದರಿಂದ ಅದೇ ಹೆಸರು ಎಲ್ಲೆಡೆ ಜನಜನಿತವಾಗಿರುವುದರಿಂದ ಇಲ್ಲಿನ ರೈಲ್ವೇ ನಿಲ್ದಾಣಕ್ಕೂ ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣ ಎಂಬ ಹೆಸರನ್ನು ಮರು ನಾಮಕರಣ ಮಾಡುವಂತೆಯೂ ಪ್ರಸ್ತಾಪನೆಯನ್ನು ಸಲಹಾ ಸಮಿತಿಯವರು ಸಲ್ಲಿಸಿದ್ದಾರೆ. ಇನ್ನಾದರೂ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ರೈಲ್ವೆ ಇಲಾಖೆ ಮುಂದಾಗಲಿ ಎಂಬುದೇ ಎಲ್ಲಾ ಜನರ ಆಶಯ.