ಬೆಳ್ತಂಗಡಿ : ಜೀವನ ನಿರ್ವಹಣೆಗಾಗಿ ಮಳೆ, ಬಿಸಿಲೆನ್ನದೆ ವೃತ್ತಿಯಲ್ಲಿ ನಿರತರಾಗಿರುವವರು ರಿಕ್ಷಾ ಚಾಲಕರು. ಇವರ ಆರೋಗ್ಯದ ದೃಷ್ಠಿಯಿಂದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕಿನಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ೨೪ರಿಕ್ಷಾ ತಂಗುದಾಣಗಳನ್ನು ನಿರ್ಮಿಸಲಾಗಿದ್ದು ಇನ್ನೂ ಹೆಚ್ಚಿನ ಬೇಡಿಕೆಗಳು ಬಂದಿದ್ದು ಇವುಗಳನ್ನು ನಿರ್ಮಿಸುವ ಮೂಲಕ ರಿಕ್ಷಾ ಚಾಲಕರ ಅಭಿವೃದ್ಧಿ ದೃಷ್ಠಿಯಿಂದ ಕೆಲಸ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಮಂಗಳವಾರ ಚರ್ಚ್ ರಸ್ತೆ ಬಳಿ ಕಾಂಕ್ರೀಟ್ ರಸ್ತೆ, ಹುಣ್ಸೆಕಟ್ಟೆ ಕಂಬಳದಡ್ಡ ಕಾಂಕ್ರೀಟ್ ರಸ್ತೆ, ಕರಾವಳಿ ಅಭಿವೃದ್ಧಿ ಪ್ರಾಧೀಕಾರ ರಚಿಸಿದ ಹಸಿಮೀನು ಮಾರುಕಟ್ಟೆ, ಸಂತೆಕಟ್ಟೆಯ ಮೂರು ಫ್ಲಾಟ್ ಫಾರಂ, ಸಂತೆಕಟ್ಟೆ ಅಟೋ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ರಿಕ್ಷಾ ತಂಗುದಾಣ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದಾಗ ತಕ್ಷಣ ಸ್ಪಂದಿಸಿ ಸಾರಿಗೆ ಇಲಾಖಾ ಅನುದಾನದಿಂದ ಒಂದು ಕೋಟಿ. ರೂ.ಗಳನ್ನು ಮಂಜೂರುಗೊಳಿಸಿದ್ದಾರೆ. ಇಡೀ ರಾಜ್ಯದಲ್ಲೇ ಪ್ರಥಮಬಾರಿಗೆ ಸಾರಿಗೆ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿಗೆ ರಿಕ್ಷಾ ತಂಗುದಾಣಗಳಿಗೆ ಅನುದಾನ ಮಂಜೂರಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್ ಮಟ್ಟಾರು, ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ, ಸದಸ್ಯರುಗಳಾದ ಶರತ್, ಡಿ. ಜಗದೀಶ್, ಲೋಕೇಶ್, ಲಕ್ಷ್ಮೀ, ಮುಸ್ತಾರ್ ಜಾನ್ ಮೆಬಹೂಬ್, ಅಂಬರೀಶ್, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಎಂ. ರಾಜೇಂದ್ರ ಜೈನ್, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಅರಿಗ, ಕೆಆರ್ಡಿಎಲ್ನ ಎಕ್ಸಿಕ್ಸೂö್ಯಟಿವ್ ಇಂಜಿನಿಯರ್ ಸದಾಶಿವಯ್ಯ, ಮತ್ತು ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸುಸಜ್ಜಿತವಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು ಇದರಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದ ರಿಕ್ಷಾ ಚಾಲಕರಿಗೆ ಸುಸಜ್ಜಿತ ರಿಕ್ಷಾ ತಂಗುದಾಣವನ್ನು ನಿರ್ಮಿಸಲಾಗುವುದು. ಬೆಳ್ತಂಗಡಿ ಚರ್ಚ್ ರೋಡ್ ಬಳಿ ಕೂಡ ಸುಸಜ್ಜಿತ ರಿಕ್ಷಾ ತಂಗುದಾಣ ನಿರ್ಮಿಸಲಾಗುವುದು. ಈಗಾಗಲೇ ವೇಣೂರಿನಲ್ಲಿ ಸುಮಾರು ೧.೮ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು ಇಲ್ಲಿಯೂ ಸುಸಜ್ಜಿತ ರಿಕ್ಷಾ ತಂಗುದಾಣ ನಿರ್ಮಾಣವಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾರವರನ್ನು ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಗೌರವಿಸಲಾಯಿತು.