ಬೆಳ್ತಂಗಡಿ: ವ್ಯಸನದ ಗಲೀಜು ಜೀವನದಿಂದ ಪಾನಮುಕ್ತತೆಯ ಸ್ಮರಣೀಯ ದಿನಗಳಿಗೆ ಸಾಗಲು ಪ್ರೇರೇಪಿಸುವ ಕಾರ್ಯವೇ ಮದ್ಯವರ್ಜನ ಶಿಬಿರವಾಗಿದೆ. ಆದುದರಿಂದ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಆತ್ಮವಿಶ್ವಾಸ, ಧೈರ್ಯದಿಂದ, ಘನತೆ, ಗೌರವ, ಅಂತಸ್ತಿನೊಂದಿಗೆ, ದೃಢವಾದ ಸಂಕಲ್ಪವನ್ನಿಟ್ಟುಕೊಂಡು ಪರಿವರ್ತನೆ ಹೊಂದಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 172ನೇ ವಿಶೇಷ ಶಿಬಿರದ 78 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
“ಮದ್ಯಪಾನ ಮತ್ತು ಮಾದಕ ಪದಾರ್ಥಗಳು ಪಾಪದ ಕೃತ್ಯಗಳನ್ನು ಮತ್ತು ಅಧರ್ಮದ ಕೆಲಸಗಳನ್ನು ಮಾಡಿಸುವುದಲ್ಲದೆ ಅವಘಡ, ಅಪಚಾರಗಳಿಗೂ ಪ್ರೇರಣೆ ನೀಡುತ್ತದೆ. ಇದರ ಪರಿಣಾಮವಾಗಿ ಅಮಾಯಕರು ತೊಂದರೆಯನ್ನು ಅನುಭವಿಸುವ ಸಾವಿರಾರು ನಿದರ್ಶನಗಳನ್ನು ಗಮನಿಸಬಹುದು. ಇಂತಹ ಕೆಟ್ಟ ಕೆಲಸಗಳಿಗೆ, ಸಮಾಜಬಾಹಿರ, ಅಮಾನವೀಯ ಘಟನೆಗಳಿಗೆ ಕಾರಣವಾಗುವ ಈ ವ್ಯಸನವನ್ನು ವರ್ಜಿಸುವುದು ಬಹಳ ಅಗತ್ಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಅವರು ಕುಟುಂಬದ ದಿನದ ಸಂದರ್ಭದಲ್ಲಿ ಮಾತನಾಡುತ್ತಾ “ವಿಶ್ವಾಸ, ಸಾಧನೆ, ಬದಲಾವಣೆ, ಸ್ಥಿರತೆ, ಹಂಬಲ, ಹವ್ಯಾಸ, ಸಕಾರಾತ್ಮಕ ಚಿಂತನೆ, ಉತ್ತಮ ಜೀವನ, ದೇವರ ಪ್ರೀತಿ, ಪ್ರಾರ್ಥನೆ, ತಪಸ್ಸು, ಅನುಸಂಧಾನ, ಅಹಂಕಾರ ವರ್ಜನೆ, ಗುರುಹಿರಿಯರಿಗೆ ಗೌರವ, ಪ್ರೀತಿ, ಪ್ರೇಮದೊಂದಿಗೆ ಕೌಟುಂಬಿಕ ಜೀವನವನ್ನು ನಡೆಸುವುದೇ ಪಾನಮುಕ್ತ ಜೀವನದ ಲಕ್ಷಣ’ ಎಂದು ಮಾರ್ಗದರ್ಶನ ನೀಡಿದರು.
ಮುಂದಿನ ದಿನಗಳಲ್ಲಿ ಶಾಶ್ವತ ವ್ಯಸನಮುಕ್ತಿ ಹೊಂದಲು ಬೇಕಾದ ಮಾರ್ಗೋಪಾಯಗಳು ಹಾಗೂ ಕೌಟುಂಬಿಕ ಸಾಮರಸ್ಯದ ಕುರಿತಂತೆ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ಶ್ರೀ ವಿವೇಕ್ ವಿ. ಪಾೈಸ್ ಮಾಹಿತಿ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಯೋಜನಾಧಿಕಾರಿಗಳಾದ ಮೋಹನ್ ಕೆ., ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ರಂಜಿತಾ, ಮೇಲ್ವಿಚಾರಕರಾದ ಅವಿನಾಶ್, ರಾಜೇಶ್ ಸಹಕರಿಸಿದರು.
ಮುಂದಿನ ವಿಶೇಷ ಶಿಬಿರವು 2022 ರ ಮಾರ್ಚ್ 21 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.