ಬೆಳ್ತಂಗಡಿ: ಹಕ್ಕುಪತ್ರದಲ್ಲಿ ಊರ್ಜಿತವಿರುವ ರಸ್ತೆಯನ್ನು ಮುಚ್ಚಿ ಪಕ್ಕದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಹಾಗೂ ರಸ್ತೆ ನಿರ್ಮಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮ ಪಂಚಾಯಿತಿಯ ಎರ್ಮಾಳಪಲ್ಕೆ ಎಂಬಲ್ಲಿ ನಡೆದಿದೆ.
ಇಲ್ಲಿನ ಮಹಿಳೆಯೊಬ್ಬರಿಗೆ ಗ್ರಾಮದ 70ನೇ ಸರ್ವೆ ನಂಬರ್ ನಲ್ಲಿ ಹಕ್ಕುಪತ್ರ ವಿದೆ. ಈ ಹಿಂದೆ ಅವರು ಇದೇ ಜಾಗದ ರಸ್ತೆಯನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಈ ಜಾಗದ ಸಮೀಪ ಇರುವ ಸರಕಾರಿ ಸ್ಥಳದಲ್ಲಿ ರಸ್ತೆ ನಿರ್ಮಿಸಿದ್ದು ಕಟ್ಟಡವನ್ನು ಕಟ್ಟಲಾಗಿತ್ತು.
ಈ ವಿಚಾರ ಪಂಚಾಯಿತಿಯ ಗಮನಕ್ಕೆ ಬರುತ್ತಿದ್ದಂತೆ ಪಂಚಾಯಿತಿ ವತಿಯಿಂದ ಕಟ್ಟಡ ಹಾಗೂ ರಸ್ತೆ ತೆರವುಗೊಳಿಸುವ ಕುರಿತು ಮಹಿಳೆಗೆ ನೋಟೀಸು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ರಸ್ತೆ ನಿರ್ಮಾಣ ಮತ್ತು ಕಟ್ಟಡ ಕಟ್ಟಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದು, ಇದನ್ನು ತೆರವುಗೊಳಿಸುವಂತೆ ತಹಸೀಲ್ದಾರರಿಗೆ ಮನವಿ ನೀಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್ ತಿಳಿಸಿದ್ದಾರೆ.