ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಫೆ.4ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 8ರಿಂದ 108 ಕಾಯಿ ಗಣಹೋಮ ಹಾಗೂ ರಾತ್ರಿ ಗಂಟೆ 9 ರಿಂದ ಮೂಡಪ್ಪ ಸೇವೆ ಕಾರ್ಯಕ್ರಮ ಜರಗಲಿದೆ.
ಬೆಳಿಗ್ಗೆ ಗಂಟೆ 8ಕ್ಕೆ ಉಪ್ಪಿನಂಗಡಿ ವಾಮಾನ್ ನಾಯಕ್ ಅವರ ನೇತೃತ್ವದಲ್ಲಿ ಭಜನೆ, ಪ್ರಸಿದ್ಧ ಭಜನಾ ತಂಡಗಳಿಂದ ಭಜನೆ ಸೇವೆ, ಮಧ್ಯಾಹ್ನ3ಗಂಟೆ ಯಿಂದ ಗಾನಸಿರಿ ಕಲಾಕೇಂದ್ರದ ಡಾ. ಕಿರಣ್ ಕುಮಾರ್ ಅವರ ಭಾರತದ ಗಾನಸಿರಿ ಕಲಾಕೇಂದ್ರದ ವತಿಯಿಂದ ಮಧುರ ಗೀತಾಂಜಲಿ, ಸಂಜೆ ಗಂಟೆ 5ರಿಂದ ಸೌತಡ್ಕ ಶಿಶುಮಂದಿರದ ವಿದ್ಯಾರ್ಥಿಗಳಿಂದ ಚಿಣ್ಣರ ಚಿಲಿಪಿಲಿ, ಸಂಜೆ6 ಗಂಟೆಗೆ ಪಟ್ಟೂರಿನ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ.ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಕೊಕ್ಕಡ ಗ್ರಾಪಂ ಅಧ್ಯಕ್ಷ ಯೋಗೀಶ್ ಆಲಂಬಿಲ ಉಪಸ್ಥಿತರಿರುವರು.
ರಾತ್ರಿ 9.30 ರಿಂದ ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಫೆ.3ರಂದು ಜರಗುವ ಯಕ್ಷೋತ್ಸವ ಕಾರ್ಯಕ್ರಮವನ್ನು ಬೆಳಿಗ್ಗೆ 9ಗಂಟೆಗೆ ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಉದ್ಘಾಟಿಸಲಿದ್ದಾರೆ. ಯಕ್ಷ ಭಾರತಿ ಅಧ್ಯಕ್ಷ ಶ್ರೀ ರಾಘವೇಂದ್ರ ಬೈಪಾಡಿತ್ತಾಯ, ಕೊಕ್ಕಡ ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಗುರುಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಶಿಶಿಲಶ್ರೀ ಮಹಿಳಾ ಯಕ್ಷಗಾನ ಕಲಾ ಸಂಘದ ಸದಸ್ಯ ರಿಂದ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ 2ರಿಂದ ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ಕರ್ಣ ಪರ್ವ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಜರಗಲಿದೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ,ಪಟ್ರಮೆ ಗ್ರಾಪಂ ಅಧ್ಯಕ್ಷೆ ಮೋಹಿನಿ, ಕೊಕ್ಕಡ ಗ್ರಾಪಂ ಸದಸ್ಯ ಪ್ರಭಾಕರ ಗೌಡ ಭಾಗವಹಿಸಲಿದ್ದಾರೆ. ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ಜರಗಲಿದೆ.