ಚಿಕ್ಕಮಗಳೂರು : ಮತಾಂತರ ದೇಶಾಂತರಕ್ಕೆ ಸಮಾನ ಎಂದು ಗಾಂಧೀಜಿ ಹೇಳಿದ್ದರು. ನಮ್ಮದು ಗಾಂಧೀಜಿ ಹಿಂದುತ್ವ ಎಂದು ಹೇಳುವ ಸಿದ್ದರಾಮಯ್ಯ ಅವರು ಒಮ್ಮೆ ಇತಿಹಾಸವನ್ನು ಓದಲಿ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಲಹೆ ಮಾಡಿದರು.
ಶುಕ್ರವಾರ ನಗರದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಾಂತರ ಎನ್ನುವುದು ಮತಗಳಿಕೆಗೆ ಇರುವ ಸಾಧನವಲ್ಲ. ಈ ವಿಚಾರದಲ್ಲಿ ಗಾಂಧೀಜಿ ನಿಲುವು ಬಹಳ ಸ್ಪಷ್ಟವಾಗಿತ್ತು. ಮತಾಂತರ ಎಂದರೆ ಅದೊಂದು ದೇಶಾಂತರ, ರಾಷ್ಟ್ರಾಂತರ ಎಂದು ಹೇಳಿದ್ದರು ಅದನ್ನು ಕಾಂಗ್ರೆಸ್ ಅಧ್ಯಯನ ಮಾಡಲಿ ಎಂದು ಹೇಳಿದರು.
೧೯೩೬ ರಲ್ಲಿ ರಾಯ್ಪುರ ಹಾಗೂ ಜೈಸಲ್ಮೇರ್ನಲ್ಲಿ ಅಂದಿನ ರಾಜಮನೆತನಗಳೇ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದರು. ಜವಹರಲಾಲ್ ನೆಹರೂ ಅವರು ಪ್ರಧಾನಿ ಆಗಿದ್ದಾಗ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿತ್ತು. ೧೯೬೭-೬೮ ರಲ್ಲಿ ಸಂಯುಕ್ತ ವಿಧೇಯಕ ದಳ ಮಧ್ಯ ಪ್ರದೇಶದಲ್ಲಿ ಹಾಗೂ ಒರಿಸ್ಸಾದಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿವೆ ಎಂದರು.
ಅವರವರ ಮತಗಳಲ್ಲಿ ಅವರು ಸುರಕ್ಷಿತವಾಗಿ ಮತಾಚರಣೆಗಳನ್ನು ಮಾಡಲಿ ಎನ್ನುವುದು ಮತಾಂತರ ನಿಷೇಧ ಕಾಯಿದೆಯ ಉದ್ದೇಶ. ವ್ಯಾಪಾರ, ಆಮಿಷ, ಭಯದ ಮೂಲಕ ಮತಾಂತರ ಮಾಡುವುದಕ್ಕೆ ಕಾಯಿದೆಯಲ್ಲಿ ಅವಕಾಶವಿರುವುದಿಲ್ಲ. ಸ್ವಯಿಚ್ಛೆಯಿಂದ ಮತಾಂತರಗೊಳ್ಳುವವರಿಗೆ ನಿಯಮಗಳನ್ನು ಹಾಕಲಾಗಿದೆ. ಈ ವಿಚಾರದಲ್ಲಿ ಭಯ ಯಾಕೆ ಎಂದು ಪ್ರಶ್ನಿಸಿದರು.
ಯಾರು ಪ್ರಲೋಭನೆವೊಡ್ಡಿ, ಹೆದರಿಕೆ ಹುಟ್ಟಿಸಿ, ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡುತ್ತಾರೋ ಅವರು ಭಯಪಡಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ಕಾಂಗ್ರೆಸ್ನದ್ದು ದ್ವಿಮುಖ ನೀತಿ ಅವರಿಗೆ ಸಮಾಜ ಹಾಗೂ ರಾಷ್ಟ್ರಹಿತ ಎರಡೂ ಅಗತ್ಯವಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಆಧ್ಯತೆಯಾಗಿಟ್ಟುಕೊಂಡಿದ್ದಾರೆ ಎಂದು ದೂರಿದರು.
ಒಂದು ವೇಳೆ ಮತಾಂತರವನ್ನೇ ಉದ್ದೇಶವಾಗಿಟ್ಟುಕೊಂಡು ಎಲ್ಲಾ ಮಠಾಧೀಶರು ಹೊರಟರೆ ಅಲ್ಪಸಂಖ್ಯಾತರು ಎಲ್ಲಿ ಉಳಿಯುತ್ತಾರೆ. ಯಾರು ಕಾಯಿದೆ ವಿರುದ್ಧ ಮಾತನಾಡುತ್ತಿದ್ದಾರೆ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಕಾಯಿದೆಯಲ್ಲಿ ಬೌದ್ಧ, ಜೈನ, ಸಿಕ್ ಇವಾವುದಕ್ಕೂ ನಿಬಂಧನೆಗಳನ್ನ ಹಾಕಿಲ್ಲ. ಇವಾವುವು ಸಂಸ್ಕೃತಿಯನ್ನು, ಮೂಲ ನಂಬಿಕೆಯನ್ನು ಬದಲಿಸುವುದಿಲ್ಲ. ಹಿಂದೂ ಇದ್ದವನು ಬೌದ್ಧನಾಗಬಹುದು, ಬೌದ್ಧರು ವೈಷ್ಣವರಾಗಬಹುದು, ವೈಷ್ಣವರು ಲಿಂಗಾಯತರಾಗಬಹುದು, ಲಿಂಗಾಯತರು ಸಿಕ್ ಆಗಬಹುದು, ಸಿಕ್ಕರು ಜೈನ ಧರ್ಮ ಸ್ವೀಕರಿಸಬಹುದು. ಇದಾವುದು ಮೂಲ ಸಂಸ್ಕೃತಿಯನ್ನು ಬದಲಿಸುವುದಿಲ್ಲ. ಮತಾಂತರ ನಿಷೇಧ ಕಾಯಿದೆಯಲ್ಲಿ ಈಗಲೂ ಅದಕ್ಕೆ ಅವಕಾಶವಿದೆ ಎಂದರು.
ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ೨೧ ವರ್ಷಕ್ಕೆ ನಿಗಧಿ ಪಡಿಸಿರುವುದು ಸಂಸದೀಯ ಸಮಿತಿಯ ಶಿಫಾರಸಿನ ಮೇಲೆ, ಈಗಿನ ಕಾಲದಲ್ಲಿ ಬಹುತೇಕ ಜನರು ಹೆಣ್ಣುಮಕ್ಕಳು ವಿದ್ಯಾವಂತರಾಗಲಿ ಎಂದು ಬಯಸುತ್ತಾರೆ. ಈ ಕಾರಣಕ್ಕೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಒಂದು ವೇಳೆ ಹಿಂದೂಗಳು ಮುಸಲ್ಮಾನರಾಗಿ ಪರಿವರ್ತನೆ ಆದರೆ ಅಂಬೇಡ್ಕರ್ಗೆ ಎಲ್ಲಿ ಜಾಗ ಸಿಗುತ್ತದೆ. ಹಿಂದೂಗಳು ಬೌದ್ಧ, ಜೈನರಾದರೆ ಅಂಬೇಡ್ಕರ್, ರಾಮನಿಗೂ ಜಾಗ ಸಿಗುತ್ತದೆ. ಜೈನರ ಮನೆಯಲ್ಲಿ ಗಣಪತಿ, ರಾಮನಿಗೂ ಜಾಗವಿದೆ. ಆದರೆ ಒಂದು ಬಾರಿ ಇಸ್ಲಾಂಗೆ ಮತಾಂತರವಾದರೆ ಅಂಬೇಡ್ಕರ್ಗೂ ಜಾಗವಿಲ್ಲ, ಬುದ್ಧನಿಗೂ ಜಾಗವಿಲ್ಲ. ಒಮ್ಮೆ ಕ್ರಿಶ್ಚಿಯನ್ಗೆ ಪರಿವರ್ತನೆ ಆದರೆ ಸಿದ್ದರಾಮಯ್ಯ ಅವರಿಗೆ ಎಲ್ಲಿ ಜಾಗ ಸಿಗುತ್ತದೆ ಅದನ್ನು ಅವರು ಯೋಚನೆ ಮಾಡಬೇಕು ಎಂದರು.