ಮಂಗಳೂರು: ಕರ್ನಾಟಕ ಮುನ್ಸಿಪಾಲಿಟಿ (ಸಿಗರೇಟುಗಳು ಮತ್ತಿತರ ತಂಬಾಕು ಉತ್ಪನ್ನ ಮಾರಾಟ ಸ್ಥಳಗಳ ನಿಯಂತ್ರಣಗಳು ಮತ್ತು ತನಿಖೆ) ಮಾದರಿ ಬೈಲಾಗಳು- 2020′ ರ ಅನುಷ್ಠಾನವನ್ನು ವಿರೋಧಿಸಿ, ಫೆಡರೇಷನ್ ಆಫ್ ರೀಟೇಲರ್ ಅಸೋಸಿಯೇಷನ್ ಆಫ್ ಇಂಡಿಯಾ(ಎಫ್ ಆರ್ ಎಐ) ಕರ್ನಾಟಕ ಚಾಪ್ಟರ್ ವತಿಯಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ದೊಡ್ಡ ಪ್ರಮಾಣದಲ್ಲಿ ಅಂಗಡಿ ಮಾಲೀಕರು ಒಗ್ಗೂಡಿ ಈ ಕಠೋರ ಕಾನೂನಿನ ವಿರುದ್ಧ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕೋವಿಡ್ ಲಾಕ್ಡೌನ್ಗಳು ಮತ್ತಿತರ ನಿರ್ಬಂಧಗಳಿಂದ ಕಳೆದ ಕೆಲ ವರ್ಷಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಹಿನ್ನಡೆ ಅನುಭವಿಸಿದ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಕಾನೂನು ವಿನಾಶಕಾರಿ. ಈ ಕಠೋರ ಕಾನೂನು ಅಧಿಕಾರಿಗಳಿಂದ ಶೋಷಣೆ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟು ಮಾರಾಟಗಾರರ ಸಂಘದ ವಕ್ತಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಜಾಹೀರಾತು ಮತ್ತು ವ್ಯಾಪಾರ ಹಾಗೂ ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಷೇಧ ಕಾಯ್ದೆ- 2003 (ಕೋಪ್ಟಾ) ಅನ್ವಯ ನಮ್ಮ ಸದಸ್ಯರು ಈಗಾಗಲೇ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದು ಅವರ ಅನಕ್ಷರತೆ ಹಾಗೂ ಅಜ್ಞಾನದ ಲಾಭ ಪಡೆಯುತ್ತಾರೆ. ಬೈಲಾದ ಕರಡಿನ ಪ್ರಕಾರ ತಂಬಾಕು ಉತ್ಪನ್ನ ಮಾರಾಟಗಾರರು ಲೈಸೆನ್ಸ್ ಪಡೆಯಬೇಕು ಮತ್ತು ಪ್ರತಿವರ್ಷ ಲೈಸನ್ಸ್ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೈಸನ್ಸ್ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಕಡ್ಡಾಯ. ತಪ್ಪಿದಲ್ಲಿ ದೊಡ್ಡ ಪ್ರಮಾಣದ ದಂಡ ವಿಧಿಸಲೂ ಅವಕಾಶವಿದೆ ಎಂದು ಹೇಳಿದರು.
ಕರಡು ಮಾದರಿ ಬೈಲಾಗಳು ಲೈಸನ್ಸ್ ಪಡೆದ ಅಂಗಡಿಯಲ್ಲಿ ಯಾವುದೇ `ಅಹಿತಕರ ಘಟನೆ’ ನಡೆದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಈ ಸಮಸ್ಯೆ ಪರಿಹಾರವಾಗುವವರೆಗೆ ಯಾರೂ ಅಂಗಡಿಯ ಆವರಣ ಪ್ರವೇಶಿಸುವಂತಿಲ್ಲ. ಆದರೆ ಅಹಿತಕರ ಘಟನೆ ಎನ್ನುವುದನ್ನು ವ್ಯಾಖ್ಯಾನಿಸದೇ ಇರುವುದರಿಂದ ಇದರ ಉದ್ದೇಶ ಸಣ್ಣ ವ್ಯಾಪಾರಿಗಳಿಗೆ ಕಿರುಕುಳ ನೀಡುವುದೇ ಹೊರತಾಗಿ ಬೇರೇನೂ ಇಲ್ಲ. ಸಣ್ಣ ವ್ಯಾಪಾರಿಗಳು ಲೈಸನ್ಸ್ ಪಡೆಯಲು ಮತ್ತು ನವೀಕರಿಸಲು ಖರ್ಚು ಮಾಡುವುದು ಅಸಾಧ್ಯ ಎಂದು ಪ್ರತಿಪಾದಿಸಿದರು.
ಲಕ್ಷಾಂತರ ಮಂದಿಯ ಆದಾಯ ನಷ್ಟಕ್ಕೆ ಕಾರಣವಾಗುವ ಅಂತಹ ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ರಾಜ್ಯ ಸರ್ಕಾರವು ಪರ್ಯಾಯ ಜೀವನೋಪಾಯಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಲಾಕ್ಡೌನ್ನ ಅಪಾರ ಆರ್ಥಿಕ ಸಂಕಷ್ಟ ಅನುಭವಿಸಿದ ನಂತರ ಈ ಹೊಸ ಕಾನೂನು ಈ ವ್ಯಾಪಾರಿಗಳಿಗೆ ಆಘಾತ ತಂದಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಪ್ರಸ್ತಾವಿತ ಕಾನೂನನ್ನು ತಂಬಾಕು ವಿರೋಧಿಸುವ ಎನ್ಜಿಒಗಳ ಒತ್ತಡದಿಂದ ತರಲಾಗುತ್ತಿದ್ದು ಪಟ್ಟಭದ್ರ ಹಿತಾಸಕ್ತಿಗಳು ತಂಬಾಕು ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪನಿಗಳು/ ಸೂಪರ್ಮಾರ್ಕೆಟ್ಗಳು/ ಮಾಲ್ಗಳಿಗೆ ವರ್ಗಾಯಿಸುವ ಮೂಲಕ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಕುತ್ತು ತರುತ್ತಿವೆ ಎಂಬ ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿಗಳು ರಕ್ಷಣ ಮಧ್ಯಪ್ರವೇಶಿಸಿ, ಹೊಸ ನಿಯಮಾವಳಿ ಜಾರಿ ಮಾಡದಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಬೇಕು ಮತ್ತು ಕೋವಿಡ್ ಪರಿಣಾಮವಾಗಿ ಬಂದಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಣ್ಣ ವ್ಯಾಪಾರಿಗಳಿಗೆ ನೆರವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.