ಮಂಗಳೂರು: ಇತ್ತೀಚೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಮೀನು ವ್ಯಾಪಾರದ ಹಣದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ತಲ್ಲತ್ತ್ನನ್ನು ಬಂಧಿಸಲಾಗಿದೆ.
ಬಜಾಲ್ ನಿವಾಸಿ ತಲ್ಲತ್ ಯಾನೆ ತಲ್ಲಹತ್ (35) ಬಂಧಿತ ಆರೋಪಿ. ಈತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ಪ್ರಕರಣಗಳಿವೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಧ್ಯಮದ ಜತೆ ಮಾತನಾಡಿ, ಇತ್ತೀಚೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಮೀನು ವ್ಯಾಪಾರದ ಹಣದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ತಲ್ಲತ್ತ್ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕಂಕನಾಡಿ, ಉಳ್ಳಾಲ, ಕೋಣಾಜೆ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಕೊಲೆ ಪ್ರಕರಣ ದಾಖಲಾಗಿದೆ ಎಂದರು.
60ಕ್ಕೂ ಅಧಿಕ ಮಂದಿಯ ಗ್ಯಾಂಗ್
ಆರೋಪಿ ತಲ್ಲತ್ ನಗರದ ಅಡ್ಯಾರ್, ಕಣ್ಣೂರು, ಬಜಾಲ್, ಬಂದರ್, ಉಳ್ಳಾಲ, ದೇರಳಕಟ್ಟೆ, ಫರಂಗಿಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಅಧಿಕ ಮಂದಿಯ ಯುವಕರ ಗ್ಯಾಂಗ್ ಕಟ್ಟಿಕೊಂಡು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈತನ ಸಹಚರರ ಮೇಲೂ ನಿಗಾಯಿರಿಸಲಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
8 ಮಂದಿಯ ಬಂಧನ
ಉಳ್ಳಾಲ ಹಲ್ಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ನೌಫಲ್ ವಿರುದ್ಧ 15, ಸಿದ್ಧಿಕ್ ವಿರುದ್ಧ 7 ಪ್ರಕರಣ ದಾಖಲಾಗಿದೆ. ತಲ್ಲತ್ಗೆ ಮುಂಬಯಿ, ಕೇರಳದ ಮಂಜೇಶ್ವರದ ಕ್ರಿಮಿನಲ್ಗಳ ಜತೆಯೂ ಸಂಪರ್ಕವಿರುವ ಮಾಹಿತಿ ಲಭಿಸಿದ್ದು, ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.
ಬೆದರಿಕೆ ಹಾಕುತ್ತಿದ್ದ
ಆರೋಪಿ ತಲ್ಲತ್ ಅನೇಕ ಪ್ರಕರಣದಲ್ಲಿ ಭಾಗಿಯಾಗಿದ್ದು, ಕೆಲವು ಘಟನೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸದಂತೆ ಬೆದರಿಕೆ ಹಾಕುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ರಾಬಿನ್ಹುಡ್ ಕಲ್ಚರ್ ನಮ್ಮಲ್ಲಿಲ್ಲ
ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿ ಶೋಕಿಗಾಗಿ ಸಮಾಜ ಸೇವೆ ಮಾಡುವ ರಾಬಿನ್ ಹುಡ್ ಕಲ್ಚರ್ ನಮ್ಮಲ್ಲಿ ನಡೆಯಲ್ಲ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದಾನ, ಧರ್ಮ, ರಕ್ತದಾನ ಮೂಲಕ ಸಮಾಜ ಸೇವೆ ಸಭ್ಯಸ್ಥರಂತೆ ವರ್ತಿಸಿದರೆ ಪ್ರಯೋಜನವಿಲ್ಲ ಎಂದು ಕಮಿಷನರ್ ಹೇಳಿದ್ದಾರೆ.
ಕ್ರಿಮಿನಲ್ಗಳಿಗೆ ಜಾತಿ, ಧರ್ಮವಿಲ್ಲ
ತಲ್ಲತ್ ಮುಸ್ಲಿಂ ಸಮುದಾಯದಲ್ಲಿ ಡಾನ್ ರೀತಿ ಫೋಸು ನೀಡುತ್ತಿದ್ದ. ಕ್ರಿಮಿನಲ್ಗಳಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಎನ್ನುವುದನ್ನು ಎಲ್ಲ ಜಾತಿ, ಧರ್ಮದವರು ಅರ್ಥ ಮಾಡಿಕೊಳ್ಳಬೇಕು. ಕ್ರಿಮಿನಲ್ ಯಾವತ್ತಾದರೂ ಕ್ರಿಮಿನಲ್ಗಳೇ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಕೆಲವರು ಅಪರಾಧ ಮಾಡಿದ್ದಂತಹ ಸಂದರ್ಭದಲ್ಲಿ ಜಾತಿ, ಧರ್ಮದ ರಕ್ಷಣೆ ಪಡೆದು ರಕ್ಷಣೆ ಪಡೆದುಕೊಳ್ಳುತ್ತಾರೆ. ತಲ್ಲತ್ ಕೂಡಾ ಅಲ್ಲಮಿನ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಕೋವಿಡ್ ಅವಧಿಯಲ್ಲಿ ಕಿಟ್ ವಿತರಣೆ, ರಕ್ತದಾನ ಮೂಲಕ ಸಮಾಜ ಸೇವೆಯ ಫೋಸು ನೀಡಿದ್ದಾನೆ. ಆದರೆ ಯಾವ ಸೇವೆ ಮಾಡಿದರೂ ಆತನ ಕ್ರಿಮಿನಲ್ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎಂದರು.