ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಪೌಂಡೇಶನ್ ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನ.19ರಂದು ಸಂಜೆ ಗಂಟೆ 6 ರಿಂದ ‘ಯಕ್ಷ ಸಂಭ್ರಮ 2022″ ಕಾರ್ಯಕ್ರಮ ನಡೆಯಲಿದೆ ಎಂದು ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ತಿಳಿಸಿದರು.
ಅವರು ಬುಧವಾರ ಉಜಿರೆ ಕಾಶಿ ಪ್ಯಾಲೇಸಿನ ದಿ ಓಷ್ಯನ್ ಪರ್ಲ್ ಹೊಟೇಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಗೌರವಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ಶೆಟ್ಟಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಘಟಕದ ಕಾರ್ಯಕ್ರಮ ನಡೆಯಲಿದೆ ಎಂದರು.
ನ. 19 ರಂದು ನಡೆಯುವ ಯಕ್ಷ ಸಂಭ್ರಮದಲ್ಲಿ ಸಂಜೆ 5 ಗಂಟೆಯಿಂದ ಉಜಿರೆ ಕಾಶಿ ಪ್ಯಾಲೇಸಿನ ದಿ ಓಷ್ಯನ್ ಪರ್ಲ್ ಹೊಟೇಲ್ ಆವರಣದಿಂದ ಚೆಂಡೆ, ವಾಲಗ, ವಾದ್ಯಗಳ ಸಹಿತ ಕುಣಿತ ಭಜನಾ ತಂಡಗಳ ಭಜನೆಯೊಂದಿಗೆ ಮೇಳದ ದೇವರನ್ನು ಮೆರವಣಿಗೆ ಮೂಲಕ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಹಾಕಿರುವ ಚೌಕಿಗೆ ಕರೆತರಲಾಗುವುದು ಎಂದರು.
ರಾತ್ರಿ 8 ಗಂಟೆಗೆ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷರಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪ್ಸಿಂಹ ನಾಯಕ್ ಹಾಗೂ ಹರೀಶ್ ಕುಮಾರ್, ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ, ಉದ್ಯಮಿಗಳಾದ ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ, ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ ಉಪಸ್ಥಿತರಿರುವರು.
ಪ್ರಸ್ತುತ ವರ್ಷ ಯಕ್ಷಗಾನ ಭಾಗವತ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಯಕ್ಷ ಸಂಭ್ರಮ-2022 ಪ್ರಶಸ್ತಿ ಪ್ರದಾನಿಸಲಾಗುವುದು. ಇನ್ನೊರ್ವ ಯುವ ಯಕ್ಷಗಾನ ಕಲಾವಿದ ಮನೋಜ್ ಕರಿಮಣೇಲು ಅವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಹಸ್ತಾಂತರ ಮಾಡಲಾಗುವುದು ಎಂದರು.
ಸಂಜೆ ಗಂಟೆ 6 ರಿಂದ ರಥಬೀದಿಯಲ್ಲಿ ಪಾವಂಜೆ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದ್ದು,
ವಿಶೇಷ ಆಕರ್ಷಣೆಯಾಗಿ ಸ್ವರ್ಣ ಕಿರೀಟದಲ್ಲಿ ಶ್ರೀ ದೇವಿ ಕಂಗೊಳಿಸಲಿದ್ದಾರೆ ಎಂದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ ಅವರು, ಕಳೆದ ಐದು ವರ್ಷದಿಂದ ಬೆಳ್ತಂಗಡಿ ಘಟಕ ಆರಂಭಿಸಲಾಗಿದೆ. ಪಟ್ಲ ಸತೀಶ ಶೆಟ್ಟರ ನೇತೃತ್ವದಲ್ಲಿ ಯಕ್ಷಗಾನ ಪಟ್ಲ ಫೌಂಡೇಶನ್ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ರಂಗದ ಹಿರಿಯ ಕಲಾವಿದರನ್ನು ಗುರುತಿಸಿ, ಆರ್ಥಿಕ ಸಹಾಯದೊಂದಿಗೆ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಘಟಕದ ಪ್ರ. ಕಾರ್ಯದರ್ಶಿ ಶಿತಿಕಂಠ ಭಟ್, ಸದಸ್ಯ ಸಚಿನ್ ಶೆಟ್ಟಿ ಇದ್ದರು.