ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಎಲ್ಲಾ ಕಾರ್ಯಕ್ರಮಗಳು ಶನಿವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಮೂರನೇ ದಿನವಾದ ಇಂದೂ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿವೆ.
ಸೋಮವಾರ ಎಂದಿನಂತೆ ರಾಜ್ಯಮಟ್ಟದ ವಸ್ತುಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ತಡರಾತ್ರಿಯವರೆಗೆ ತೆರೆದಿರುತ್ತದೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6 ಗಂಟೆಗೆ ಚೈತ್ರಾ ಎಚ್.ಜಿ.ಬೆಂಗಳೂರು ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಗೊಳ್ಳಲಿದೆ. ಬಳಿಕ 7 ಗಂಟೆಗೆ ಬೆಂಗಳೂರಿನ ಐಶ್ವರ್ಯ ಆರ್.ಅವರಿಂದ ಭರತನೃತ್ಯ, ರಾತ್ರಿ 8 ಗಂಟೆಯಿಂದ ಮಣಿಪಾಲದ ವಿಪಂಚಿ ಬಳಗದವರಿಂದ ಪಂಚವೀಣಾ ವಾದನ ಕೊನೆಯಲ್ಲಿ 9 ಗಂಟೆಗೆ ಬೆಂಗಳೂರಿನ ತನುಜಾ ಜೈನ್ ಮತ್ತು ತಂಡದವರಿಂದ ಭರತ ನೃತ್ಯ ಪ್ರದರ್ಶನಗೊಳ್ಳಲಿದೆ.
ಲಲಿತಕಲಾ ಗೋಷ್ಠಿ: ಸೋಮವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5.30 ರಿಂದ ನಾಗಸ್ವರ ವಾದನ, 7 ಗಂಟೆಗೆ ಉಡುಪಿ ಭಾರ್ಗವಿ ಆರ್ಟ್ಸ್, ಡ್ಯಾನ್ಸ್ ಅಕಾಡೆಮಿಯವರಿಂದ ಭಾವ- ಯೋಗ- ಗಾನ-ನೃತ್ಯ ಪ್ರಸ್ತುತಗೊಳ್ಳಲಿದೆ.ರಾತ್ರಿ 8-30 ರಿಂದ ಹಾಸನದ ನಾಟ್ಯಕಲಾನಿವಾಸ್ನ ವಿದ್ವಾನ್ ಉನ್ನತ್ ಹೆಚ್.ಆರ್. ಮತ್ತು ತಂಡದವರಿಂದ ಸ್ವಾತಿ ತಿರುನಾಳ್ರ ಭಾವಯಾಮಿ ರಘುರಾಮಮ್ ಎಂಬ ರಾಮಾಯಣದ ಪ್ರಸ್ತುತಿ ಇರಲಿದೆ.
ಮಂಗಳವಾರ(ನಾಳೆ)ಯ ಕಾರ್ಯಕ್ರಮಗಳು:
ಸರ್ವಧರ್ಮ ಸಮ್ಮೇಳನದ 90 ನೇ ಅಧಿವೇಶನವು ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದ್ದು ಇದರ ಉದ್ಘಾಟನೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ನೆರವೇರಿಸಲಿದ್ದಾರೆ. ಶಿವಮೊಗ್ಗದ ವಿದ್ವಾಂಸ, ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರು ಫಾl ಮಾರ್ಸೆಲ್ ಪಿಂಟೋ, ವಿಜಯಪುರ ಜಿ.ಕ.ಸಾ.ಪರಿಷತ್ತಿನ ಹಾಸೀಂಪೀರ ಇ ವಾಲಿಕಾರ ಹಾಗೂ ಮೂಡಬಿದರೆಯ ವಾಗ್ಮಿ ಮುನಿರಾಜ ರೆಂಜಾಳ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಡಾ ಜಯಂತಿ ಮತ್ತು ಕುಮರೇಶ್ ಅವರಿಂದ ಜುಗಲ್ಬಂದಿ ನಡೆಯಲಿದೆ.