ಬಂಟ್ವಾಳ: ಹಾಲು ಸಹಿತ ಪ್ರತೀ ವಸ್ತುಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಿರುವ ಈ ಕಾಲದಲ್ಲಿಯೂ 10 ರೂ.ವಿಗೆ ಅಗತ್ಯವಿದ್ದವರ ಹೊಟ್ಟೆ ತುಂಬಿಸುತ್ತಿದ್ದ ಬಿ.ಸಿ.ರೋಡಿನಲ್ಲಿರುವ “ಇಂದಿರಾ ಕ್ಯಾಂಟೀನ್ ” ಕಳೆದ ಎರಡುದಿನಗಳಿಂದ ಬಂದ್ ಆಗಿದೆ.
ಕ್ಯಾಂಟೀನ್ ನ ಸಿಬ್ಬಂದಿಗಳಿಗರ ಆರು ತಿಂಗಳಿನಿಂದ ವೇತನ ಸಿಗದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳೇ ಕ್ಯಾಂಟೀನ್ ಗೆ ಬೀಗ ಹಾಕಿ ಪ್ರತಿಭಟನೆಗಿಳಿದಿದ್ದಾರೆ. ಇದರಿಂದಾಗಿ ಇಂದಿರಾ ಕ್ಯಾಂಟೀನ್ ಅವಲಂಬಿಸಿದ್ದ ಅನೇಕರ ಹೊಟ್ಟೆಗೆ ಹೊಡೆತ ಬಿದ್ದಿದೆ.ನಾಲ್ಕು ವರ್ಷಗಳ ಹಿಂದೆ ಬಿ.ಸಿ.ರೋಡಿನ ಆಡಳಿತ ಸೌಧದ ಪಕ್ಕದಲ್ಲಿ ಕಾರ್ಯರೂಪಕ್ಕೆ ಬಂದು ಬಡವರಿಗೆ ಪ್ರಯೋಜನಕಾರಿಯಾಗಿದ್ದ ಇಂದಿರಾ ಕ್ಯಾಂಟೀನ್ ಬುಧವಾರದಿಂದ ಮುಚ್ಚಿದ್ದು,ಪ್ರತಿದಿನ ಈ ಕ್ಯಾಂಟೀನ್ ನ ಉಪಹಾರವನ್ನೇ ಅವಲಂಬಿಸುವರು ಕ್ಯಾಂಟೀನ್ ಗೆ ಎಡತಾಕಿ ವಾಪಾಸಾಗುತ್ತಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಲಾಗಿತ್ತು. ಮಾಜಿ ಸಚಿವ ರಮಾನಾಥ ರೈ ಅವರ ಪ್ರಯತ್ನದಿಂದ ಬಂಟ್ವಾಳಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿತ್ತು.
ಕಳೆದ ಆರು ತಿಂಗಳಿನಿಂದ ಕ್ಯಾಂಟೀನ್ ನ ಸಿಬ್ಬಂದಿಗಳಿಗೆ ವೇತನ ಸಿಗದಿರುವುದರಿಂದ ಜಿಲ್ಲಾಧಿಕಾರಿ,ಸಂಬಂಧ ಸಂಬಂಧಪಟ್ಟ ಏಜೆನ್ಸಿಯವರಿಗೆ ಮನವಿ ಸಲ್ಲಿಸಿ ಬುಧವಾರ ಕ್ಯಾಂಟೀನ್ಗೆ ಬೀಗ ಹಾಕಿ ತೆರಳಿದ್ದಾರೆ.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಸಂಸ್ಥೆ ನೀಡಿದ ಬಿಲ್ಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ಹಣ ಗುತ್ತಿಗೆದಾರ ಏಜೆನ್ಸಿ ಸಂಸ್ಥೆಗೆ ಸಂದಾಯವಾಗುತ್ತಿತ್ತು. ಏಜೆನ್ಸಿ ಸಂಸ್ಥೆಯವರೇ ಕ್ಯಾಂಟೀನ್ ಸಿಬ್ಬಂದಿಗೆ ವೇತನ ಪಾವತಿ ಮಾಡುತ್ತಿದ್ದರು. ಆರು ತಿಂಗಳಿಂದ ವೇತನ ಬರದಿದ್ದರೂ ನಮ್ಮ ಕೈಯ ಹಣ ಖರ್ಚು ಮಾಡಿಕೊಂಡು ಕ್ಯಾಂಟೀನ್ ಮುಂದುವರಿಸಿಕೊಂಡು ಬಂದಿದ್ದೇವೆ.ಕೋವಿಡ್ ಕಾಲದಲ್ಲು ಕ್ಯಾಂಟೀನ್ ತೆರೆದು ನಾವೇ ಉಪಹಾರ ಸಿದ್ದಪಡಿಸಿ ಕೊಡುತ್ತಿದ್ದೆವು , ಇನ್ನು ಮುಂದುವರಿಸುವುದು ಸಾಧ್ಯವಿಲ್ಲ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಬಂಟ್ವಾಳದಲ್ಲಿ ಅಡುಗೆಯವರು, ಕ್ಲೀನರ್ ಮತ್ತು ಸಪ್ಲೈಯರ್ ಸೇರಿ ಒಟ್ಟು 8 ಮಂದಿ ಇದ್ದರು.ಈ ಪೈಕಿ 4 ಮಂದಿಯನ್ನು ಕೈ ಬಿಡಲಾಗಿದ್ದು,ಪ್ರಸ್ತುತ 4 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರು ತಿಂಗಳಿನಿಂದ ನಮಗೆ ವೇತನ ಪಾವತಿಯಾಗಿಲ್ಲ. ಹಾಗಾಗಿ ನಾವು ಬುಧವಾರದಿಂದ ఇందిರಾ ಕ್ಯಾಂಟೀನ್ ಮುಚ್ಚುತ್ತೆವೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ,ಸಂಬಂಧಪಟ್ಟ ಏಜೆನ್ಸಿಯವರಿಗೆ ಮಾಹಿತಿ ನೀಡಿದ್ದೆವೆ.ಈ ಹಿಂದೆ ಕೂಡ ಇದೇ ರೀತಿ ವೇತನ ಬಾಕಿ ಇಟ್ಟಾಗ ಪ್ರತಿಭಟನೆಗೆ ಮುಂದಾದ ಸಂದರ್ಭ ಎರಡು ತಿಂಗಳ ವೇತನ ಪಾವತಿಸಿ ಮೂಗಿಗೆ ತುಪ್ಪ ಸುರಿದಿದ್ದರು.ಇದೀಗ ಮತ್ತೆ ಇದು ಪುನರಾವರ್ತನೆಯಾಗಿದ್ದು,ಕಳೆದ ಆರು ತಿಂಗಳಿನಿಂದ ವೇತನ ಸಿಗದಿರುವಿದರಿಂದ ನಮ್ಮ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
300 ಉಪಾಹಾರ, ಊಟ
ಬಂಟ್ವಾಳ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ 200 ರಿಂದ 300 ಮಂದಿಗೆ ಉಪಾಹಾರ, ಮಧ್ಯಾಹ್ನ 300 ಮಂದಿಗೆ ಊಟ ಹಾಗೂ ರಾತ್ರಿ 50 ರಿಂದ 75 ರಷ್ಟು ಮಂದಿಗೆ ಉಪಹಾರದ ವ್ಯವಸ್ಥೆ ಇತ್ತು. ಸಾರ್ವಜನಿಕರು ಮಾತ್ರವಲ್ಲದೆ ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಬಳಿಯೇ ಇರುವ ತಾಲೂಕು ಕಚೇರಿ ಸಹಿತ ವಿವಿಧ ಕಚೇರಿಗಳಿಗೆ ಬರುವವರಿಗೆ ಪ್ರಯೋಜನವಾಗುತ್ತಿತ್ತು. 5 ರೂಪಾಯಿಗೆ ಉಪಾಹಾರ, 10 ರೂಪಾಯಿಗೆ ಊಟ ನೀಡಲಾಗುತ್ತಿತ್ತು.