ಮಂಗಳೂರು: ರಾಜ್ಯ ಬಿಜೆಪಿ ಸರಕಾರ ಮೀನುಗಾರರಿಗೆ ವಸತಿ, ಸಬ್ಸಿಡಿ ಸಹಿತ ಯಾವುದೇ ನೆರವು ನೀಡಿಲ್ಲ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಬಿಜೆಪಿ ಸರಕಾರ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ತಮ್ಮ ರಾಜಕೀಯ ಅಸ್ತಿತ್ವಕ್ಕೆ ಮೀನುಗಾರರ ಜೀವವನ್ನು ಬಳಸುತ್ತಿದ್ದಾರೆ. ಅವರ ಅಭಿವೃದ್ಧಿ ನಿಟ್ಟಿನಲ್ಲಿ, ಅವರಿಗೆ ಬದುಕನ್ನು ಕಟ್ಟಿಕೊಡಲು ಯಾವುದೇ ಕ್ರಮ ಕೈಗೊಂಡಿಲ್ಲ.
ಕಾಂಗ್ರೆಸ್ ಸರಕಾರ ತಂದಿದ್ದ ಯೋಜನೆಗಳನ್ನೂ ಸಂಪೂರ್ಣಸ್ಥಗಿತಗೊಳಿಸಿದ್ದಾರೆ. ಸಬ್ಸಿಡಿ ದರದ ಸೀಮೆಎಣ್ಣೆಯನ್ನು ನೀಡಲೂ ಬಿಜೆಪಿ ಸರಕಾರ ಹಿಂದೇಟು ಹಾಕಿದೆ ಎಂದು ಖಾದರ್ ಹೇಳಿದ್ದಾರೆ.
ನಮ್ಮ ಸರಕಾರ ಇದ್ದಾಗ ಮೀನುಗಾರರ ನೋವಿಗೆ ಸ್ಪಂದಿಸುತ್ತಿತ್ತು. ಬಿಜೆಪಿ ಸರಕಾರ ಬಂದ ಬಳಿಕ ಮೀನುಗಾರರಿಗೆ ಒಂದೇ ಒಂದು ಮನೆಯನ್ನೂ ನೀಡಲು ಮುಂದಾಗಿಲ್ಲ. ಕೆಲವು ದಿನಗಳ ಹಿಂದೆ ಪಟ್ಟಿ ಕಳುಹಿಸಿದ್ದಾರೆ. ಆದರೆ ಅಲ್ಲಿನ ಮೀನುಗಾರರಿಗೆ ಮನೆ ಕೊಟ್ಟಿಲ್ಲ. ಯಾವ ರೀತಿಯಲ್ಲಿ ಮೀನುಗಾರರನ್ನು ನಡೆಸಿಕೊಳ್ಳುತ್ತಿದ್ದಾರೆ ಎನ್ನವುದಕ್ಕೆ ಸಾಕ್ಷಿ ಇದು.
ಕರಾವಳಿಯ ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಯಾರೂ ಕೂಡ ಮೀನುಗಾರರ ಪರವಾಗಿ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಮಂಗಳೂರಿಗೆ ಬಂದ ಸಂದರ್ಭದಲ್ಲೂ ಮೀನುಗಾರರ ಸಮಸ್ಯೆಯನ್ನು ಮುಂದಿಡುವ ಕೆಲಸ ಮಾಡಿಲ್ಲ. ಹೊಸ ಯೋಜನೆ ಬಿಡಿ, ಕಾಂಗ್ರೆಸ್ನ ಯೋಜನೆಗಳನ್ನೂ ಕೂಡಾ ಮೀನುಗಾರರಿಗೆ ತಲುಪಿಸಲು ಇವರಿಗೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೀನುಗಾರರ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುಂದಿನ 10 ದಿನಗಳ ಒಳಗೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಖಾದರ್ ಎಚ್ಚರಿಸಿದರು.