ಬೆಳ್ತಂಗಡಿ: ‘ ಜೈ ಪ್ರಕಾಶನ ಸಂಸ್ಥೆ ಬೆಳ್ತಂಗಡಿ ಇದರ ವತಿಯಿಂದ ಹೊರತರಲಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ವ್ಯಕ್ತಿತ್ವ ಚಿತ್ರಣ ‘ವಸಂತ ವಿನ್ಯಾಸ’ ಪುಸ್ತಕವನ್ನು ಡಿ.17 ರಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಿಡುಗಡೆಗೊಳಿಸಲಿದ್ದಾರೆ ‘ ಎಂದು ವಸಂತ ವಿನ್ಯಾಸ ಪುಸ್ತಕ ಅನಾವರಣ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ದೇವಿ ಪ್ರಸಾದ್ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ವೈ.ಎಸ್.ವಿ. ದತ್ತ ಪುಸ್ತಕ ಪರಿಚಯವನ್ನು ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಶುಭಾಶಂಸನೆ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
‘ಸಿದ್ಧರಾಮಯ್ಯನವರು ಬೆಳಿಗ್ಗೆ ಸುಮಾರು ೧೧.೩೦ಕ್ಕೆ ಬೆಳ್ತಂಗಡಿಗೆ ಬರುವ ನಿರೀಕ್ಷೆ ಇದೆ. ಇದೊಂದು ಸಾಹಿತ್ಯದ ಕಾರ್ಯಕ್ರವಾಗಿದ್ದು, ಬಂಗೇರರ ಬದುಕಿನ ಬಗ್ಗೆ ಬರುವ ಪ್ರಥಮ ಪುಸ್ತಕವಾಗಿದೆ. ಸಿದ್ಧರಾಮಯ್ಯ ಅವರು ಬಂಗೇರರ ಆತ್ಮೀಯ ಸ್ನೇಹಿತರು. ಅದಕ್ಕಾಗಿ ಇದೊಂದು ಪ್ರಮುಖ ಕಾರ್ಯಕ್ರಮ ಎಂಬ ನೆಲೆಯಲ್ಲಿ ಪುಸ್ತಕ ಬಿಡುಗಡೆಗಾಗಿಯೇ ಸಿದ್ಧರಾಮಯ್ಯ ಬೆಳ್ತಂಗಡಿಗೆ ಬರುತ್ತಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಂದವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಗುರುದೇವ ಕಾಲೇಜಿನ ವಠಾರದಲ್ಲಿ ಮಾಡಲಾಗಿದೆ’ ಎಂದು ತಿಳಿಸಿದರು.
ಸಿದ್ಧರಾಮಯ್ಯರ ಬೆಳ್ತಂಗಡಿ ಭೇಟಿಯ ಪ್ರಮುಖ ಕಾರ್ಯಕ್ರಮವೇ ಪುಸ್ತಕ ಬಿಡುಗಡೆಯಾಗಿದೆ. ಇದು ಸಾಹಿತ್ಯಿಕ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ಆದರೆ ಅದೇ ದಿನ ಲಾಯಿಲ ಪ್ರಸನ್ನ ಕಾಲೇಜಿನಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಫೆಕ್ಸ್, ಬ್ಯಾನರ್, ಆಮಂತ್ರಣ ಪತ್ರಿಕೆಗಳಲ್ಲಿ ಪುಸ್ತಕ ಬಿಡುಗಡೆ ಅಲ್ಲಿ ಎಂದು ಹಾಕುತ್ತಿರುವುದು ಸರಿಯಲ್ಲ. ಈ ಕಾರ್ಯಕ್ರಮಕ್ಕೂ ಪ್ರಸನ್ನ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ. ಪುಸ್ತಕ ಬಿಡುಗಡೆಯ ಒಂದು ಒಳ್ಳೆಯ ಕಾರ್ಯಕ್ರಮವನ್ನು ಕೆಡಿಸಿ ಜನರಲ್ಲಿ ಗೊಂದಲಕ್ಕೆ ಉಂಟು ಮಾಡುವ ಕಾರ್ಯ ಮಾಡುವುದು ಕಬಡ್ಡಿ ಸಂಘಟಕರಿಗೆ ಹಿತವಲ್ಲ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಸಂಚಾಲಕರುಗಳಾದ ಜನಾರ್ದನ ಬಂಗೇರ ಮೂಡಾಯಿಗುತ್ತು, ಚಿದಾನಂದ ಪೂಜಾರಿ, ಭಗೀರಥ ಜಿ, ವಸಂತ ಬಿ.ಕೆ ಇದ್ದರು.