ಬಂಟ್ವಾಳ: ಬಂಟ್ವಾಳ ಬಿಜೆಪಿಯ ಕಾರ್ಯಕರ್ತರು, ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸದಿಂದ ಈ ಬಾರಿಯ ಪಾದಯಾತ್ರೆ ಜೀವನದ ಸಾರ್ಥಕತೆಯನ್ನು ತಂದುಕೊಟ್ಟಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ನಡಿಗೆ- ಗ್ರಾಮದೆಡೆಗೆ ಶಾಸಕರ ನಡಿಯ ೧೧ನೇ ದಿನದ ಪಾದಯಾತ್ರೆಯ ಬಳಿಕ ಕುರಿಯಾಳ ದುರ್ಗಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಪಾದಯಾತ್ರೆಯ ಸಂದರ್ಭದಲ್ಲಿ ಸಾಕಷ್ಟು ಮಂದಿ ಹಿರಿಯ ಕಾರ್ಯಕರ್ತರು ತಮ್ಮ ಜೀವಿತಾವಧಿಯಲ್ಲಿ ಬಿಜೆಪಿಯ ವೈಭವವನ್ನು ಕಾಣಲು ಸಾಧ್ಯವಾಯಿತ್ತಲ್ಲ ಎಂದು ಆನಂದಬಾಷ್ಪ ಸುರಿಸಿದ್ದಾರೆ. ಅವರು ಪ್ರಾರಂಭದಲ್ಲಿ ಯಾವುದೇ ಅಧಿಕಾರಿಗಳ ಆಸೆಗಳಿಲ್ಲದೆ ಪಕ್ಷ ಕಟ್ಟುವ ಕಾರ್ಯ ಮಾಡಿದ್ದು, ಈಗ ಅವರಲ್ಲಿ ಸಾರ್ಥಕತೆ ಮೂಡಿದೆ. ಜನರು ನೀಡಿದ ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮಾಡೋಣ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸ್ವಾತಂತ್ರ್ಯ ಕಾಲಘಟ್ಟದ ಕಾಂಗ್ರೆಸ್ ಗೂ ಈಗಿನ ಕಾಂಗ್ರೆಸ್ ಗೆ ಸಾಕಷ್ಟು ವ್ಯತ್ಯಾಸವಿದ್ದು, ಈಗ ನಕಲಿ ಕಾಂಗ್ರೆಸ್ ಅಸ್ತಿತ್ವದಲ್ಲಿದೆ. ಕುರಿಯಾಳ ಬೂತ್ ಗಳನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ಶಾಸಕ ರಾಜೇಶ್ ನಾಯ್ಕ್ ಅನುದಾನ ನೀಡಿರುವುದು ಸಾರ್ಥಕವಾಗುತ್ತದೆ. ಸಿದ್ದರಾಮಯ್ಯ ಅವರೇ ನೀವು ಯಾವ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವರು ಎಂಬುದನ್ನು ಸ್ಪಷ್ಟ ಪಡಿಸಬೇಕು. ಬ್ರಿಟಿಷರ ಗುಂಡಿಗೆ ಎದೆ ಕೊಟ್ಟ ಒಬ್ಬ ಕಾಂಗ್ರೆಸ್ ನವರ ಹೆಸರು ಹೇಳಿ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ಜಗತ್ತಿನ ನಾಯಕರಾಗಿದ್ದು, ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ. ಮುಂದಿನ ಚುನಾವಣೆ ನಮ್ಮ ಅಸ್ಮಿತೆಯ ಪ್ರಶ್ನೆಯಾಗಿದ್ದು, ಬಿಜೆಪಿಯನ್ನು ಗೆಲ್ಲಿಸುವ ಕಾರ್ಯ ಮಾಡೋಣ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನೀಲ್ ಕಾಯರ್ ಮಾರ್, ಯಾತ್ರೆಯ ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ್ ಬಜ, ಗ್ರಾ.ಪಂ.ಸದಸ್ಯರಾದ ಯಶೋಧ, ಅಶ್ವಿನಿ ಶೆಟ್ಟಿ, ಶ್ರೀದೇವಿ, ಸುಹಾಸಿನಿ, ಬೂತ್ ಅಧ್ಯಕ್ಷರಾದ ಪ್ರದೀಪ್ ಮಾರ್ಲ ಕುಟಿಲ, ಸುರೇಂದ್ರ ಶೆಟ್ಟಿ ಪಾಪುದಡ್ಕ, ಸಹಸಂಚಾಲಕ ರೂಪೇಶ್ ಕುಟಿಲ ಉಪಸ್ಥಿತರಿದ್ದರು.
ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಕ್ಷೇತ್ರದ ಅನುದಾನ, ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ಕುರಿಯಾಳ ಶಕ್ತಿಕೇಂದ್ರದ ಸಂಚಾಲಕ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.