ಮಂಗಳೂರು, ಮಾ.10: ಕಾರ್ಮಿಕರಿಗೆ ಮತ್ತಷ್ಟು ಶಕ್ತಿ ಹಾಗೂ ಅವಕಾಶಗಳನ್ನು ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದೆ, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಕಾರ್ಮಿಕರು ಉತ್ತಮ ಜೀವನ ನಡೆಸುವಂತೆ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಕರೆ ನೀಡಿದರು.
ನಗರದ ಶರಬತ್ ಕಟ್ಟೆಯ ಹತ್ತಿರದಲ್ಲಿರುವ ಮಹಿಳಾ ಐಟಿಐ ಕಾಲೇಜಿನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 576 ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮೇಸನ್, ಪ್ಲಂಬರ್, ಎಲೆಕ್ಟ್ರಿಕಲ್ ಕೆಲಸ ಮಾಡುವ ಫಲಾನುಭವಿಗಳಿಗೆ ಅವರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ 43 ವಸ್ತುಗಳನ್ನುಳ್ಳ 3000 ರೂ.ಗಳ ಕಿಟ್ ಹಾಗೂ ಐದು ಮತ್ತು ಎಂಟನೇ ತರಗತಿಯ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಪುಸ್ತಕದ ಕಿಟ್ ವಿತರಿಸಲಾಗಿದೆ, ಅವುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿ ಅದರ ಲಾಭ ಪಡೆಯಬೇಕು, ಎಲ್ಲಾ ಕಟ್ಟಡ ಕಾರ್ಮಿಕರು ಫಲಾನುಭವಿ ಕಾರ್ಡ್ ಗಳನ್ನು ಮಾಡಿಸಿಕೊಂಡು ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ 19 ರೀತಿಯ ಉಪಯೋಗಗಳನ್ನು ಪಡೆಯಬೇಕು, ಅದೇ ರೀತಿ ಶೈಕ್ಷಣಿಕ ಧನ ಸಹಾಯ ಯೋಜನೆಯಡಿ ಅರ್ಜಿ ಸಲ್ಲಿಸಿ ಎಲ್ ಕೆ ಜಿ ಯಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಧನ ಸಹಾಯ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ಲಂಬರ್, ಮೇಸನ್, ಎಲೆಕ್ಟ್ರಿಕಲ್ ಫಲಾನುಭವಿಗಳಿಗೆ ಹಾಗೂ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ 576 ಕಿಟ್ ಗಳನ್ನು ಶಾಸಕರು ವಿತರಿಸಿದರು.
ಉಪಮೇಯದ ಪೂರ್ಣಿಮಾ, ಕಾರ್ಪೊರೇಟರ್ ಗಳಾದ ಪ್ರೇಮಾನಂದ ಶೆಟ್ಟಿ, ಶಕೀಲ ಕಾವ, ಭಾಸ್ಕರ್ ಮೂಲ್ಯ, ವೀಣಾ ಮಂಗಳ, ಮಹಿಳಾ ಐಟಿಐ ನ ಪ್ರಾಂಶುಪಾಲ ಶಿವಕುಮಾರ್, ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ಹಾಗೂ ಕಾವೇರಿ ಸೇರಿದಂತೆ ಹಿರಿಯ ಕಾರ್ಮಿಕ ನಿರೀಕ್ಷಕರು ವೇದಿಕೆಯಲ್ಲಿದ್ದರು.